ಸಾತನೂರು (ಕನಕಪುರ): ನರೇಗಾ ಯೋಜನೆಯಡಿ ನಿರ್ಮಾಣ ಮಾಡಿ ರುವಂತ ಚರಂಡಿ ಮತ್ತು ಚೆಕ್ಡ್ಯಾಂ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು, ನಿಯಮಬಾಹಿರವಾಗಿದೆ ಎಂದು ಆರ್ಟಿಐ ಕಾರ್ಯಕರ್ತ ಕೆ.ರವಿ ಕುಮಾರ್ ನೀಡಿರುವ ದೂರಿನ ಮೇರೆಗೆ ಗುಣ ನಿಯಂತ್ರಣ ಅಧಿಕಾರಿಗಳು ಕಂಚನಹಳ್ಳಿ ಸಮೀಪದ ಚೆಕ್ಡ್ಯಾಂ ಕಾಮಗಾರಿಯ ಪರಿಶೀಲನೆ ನಡೆಸಿದರು.
ತಾಲ್ಲೂಕಿನ ಸಾತನೂರು ಹೋಬಳಿ ಕಬ್ಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚನಹಳ್ಳಿ ಗ್ರಾಮದ ಸಮೀಪದ ಕಾಡಿನಹಳ್ಳಕ್ಕೆ ನಿರ್ಮಾಣ ಮಾಡಿದ್ದ ಚೆಕ್ಡ್ಯಾಂ ದುರುದ್ದೇಶದಿಂದ ಕೂಡಿದೆ ಹಾಗೂ ಯೋಜನಾ ವರದಿಯಲ್ಲಿ ದಾಖಲಿಸಿರುವಂತೆ ಗುಣಮಟ್ಟದಿಂದ ಕೂಡಿಲ್ಲ. ಕಳಪೆಯಾಗಿದೆ ಎಂದು ರವಿಕುಮಾರ್ ಆರೋಪಿಸಿ ಜಿಲ್ಲಾ ಪಂಚಾಯಿತಿ ಇಲಾಖೆ ಮತ್ತು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು.
ದೂರಿನನ್ವಯ ಜಲ್ಲಾ ಗುಣಮಟ್ಟ ನಿಯಂತ್ರಣ ಮೇಲ್ವಿಚಾರಕ ರಾಮಕೃಷ್ಣ, ಒಂಬುಡ್ಸ್ಮನ್ ವಿಷಕಂಠ, ಸಹಾಯಕ ಎಂಜಿನಿಯರ್ ಶಶಿಧರ್ ತಂಡವು ಅಕ್ರಮ ನಡೆದಿದೆ ಎನ್ನಲಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿತು.
ಮರಳು ಸಂಗ್ರಹಕ್ಕಾಗಿ ಚೆಕ್ ಡ್ಯಾಂ ನಿರ್ಮಾಣ ಮಾಡಲಾಗಿದೆ. ಮತ್ತೊಂದು ಕಡೆ ನಿರ್ಮಾಣ ಮಾಡಿರುವುದು ಕಳಪೆಯಾಗಿದ್ದು, ವಾಲಿಕೊಂಡಿದೆ. ಗ್ರಾಮದಲ್ಲಿ ಕೂಲಿ ಕಾರ್ಮಿಕರನ್ನು ಬಳಸದೇ ಜೆಸಿಬಿ ಯಂತ್ರ ಬಳಸಿದ್ದು, ಇಲ್ಲಿಯೂ ಕಳಪೆಯಾಗಿದ್ದು ಹಣ ಮಾಡುವ ಉದ್ದೇಶದಿಂದ ಕಾಮಗಾರಿ ಮಾಡಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದರು.
ಅದರಂತೆ ಅಧಿಕಾರಿಗಳು ದೂರು ದಾರರು, ಗ್ರಾಮದ ಮುಖಂಡರು, ಜಮೀನಿನ ಮಾಲೀಕರು, ಕಾಮಗಾರಿ ನಿರ್ಮಿಸಿದವರ ಸಮ್ಮುಖದಲ್ಲಿ ಕಾಮಗಾರಿ ನಿರ್ಮಾಣದ ಅಳತೆ ಮತ್ತು ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿ ವರದಿ ಪಡೆದುಕೊಂಡರು. ಗುಣಮಟ್ಟದ ಬಗ್ಗೆ ಸವಿವರ ವರದಿ ಸಿದ್ಧಪಡಿಸಿ ಮುಂದಿನ ಕ್ರಮಕ್ಕಾಗಿ ಇಲಾಖೆಗೆ ಕಳಿಸಿಕೊಡುವುದಾಗಿ ತಿಳಿಸಿದ್ದಾರೆ. ದೂರುದಾರರಾದ ಆರ್ಟಿಐ ಕಾರ್ಯಕರ್ತ ಕೆ.ರವಿಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.