ADVERTISEMENT

ಜನಗಣತಿಗೆ ವಿಧ್ಯುಕ್ತ ಚಾಲನೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 19:30 IST
Last Updated 9 ಫೆಬ್ರುವರಿ 2011, 19:30 IST

ರಾಮನಗರ: ರಾಷ್ಟ್ರವ್ಯಾಪಿ 10 ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ಸಮೀಕ್ಷಾ ಕಾರ್ಯಕ್ಕೆ ಜಿಲ್ಲೆಯಲ್ಲಿ ಬುಧವಾರ ಚಾಲನೆ ದೊರೆಯಿತು. ಪ್ರಭಾರ ಜಿಲ್ಲಾಧಿಕಾರಿ ಸಿ.ಪಿ.ಶೈಲಜಾ ಹಾಗೂ ತಹಶೀಲ್ದಾರ್ ಡಿ.ಬಿ.ನಟೇಶ್ ಅವರು ಜನಗಣತಿ ಕಾರ್ಯಕ್ಕೆ ಅಧಿಕೃತ ಚಾಲನೆ ನೀಡಿದರು.ತಾಲ್ಲೂಕಿನ ಸುಗ್ಗನಹಳ್ಳಿ ಬಳಿಯ ಕುಂಬಾರದೊಡ್ಡಿಯಲ್ಲಿನ ಶತಾಯುಷಿ ದೊಡ್ಡ ತಿಮ್ಮಯ್ಯ (105) ಅವರ ಗಣತಿ ಕಾರ್ಯವನ್ನು ಮಾಡುವ ಮೂಲಕ ಜನಗಣತಿ ಕಾರ್ಯಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.

ಇಪ್ಪತ್ತು ದಿನಗಳ ಕಾಲ ನಡೆಯುವ ಗಣತಿ ಕಾರ್ಯ ಇದೇ 28ಕ್ಕೆ ಮುಕ್ತಾಯಗೊಳ್ಳಲಿದೆ. ಜಿಲ್ಲೆಯಲ್ಲಿ ಈ ಕಾರ್ಯಕ್ಕಾಗಿ 2,246 ಸಿಬ್ಬಂದಿ ನಿಯೋಜಿಸಲಾಗಿದೆ. ಜನಗಣತಿಯಲ್ಲಿ ಕುಟುಂಬದ ಆರ್ಥಿಕ, ಸಾಮಾಜಿಕ, ಆರೋಗ್ಯ ಸ್ಥಿತಿಗತಿಗಳಿಗೆ ಸಂಬಂಧಿಸಿದ 29 ಪ್ರಶ್ನೆಗಳನ್ನು ಗಣತಿದಾರರು ಕೇಳುತ್ತಾರೆ. ಸಾರ್ವಜನಿಕರು ಎಲ್ಲ ಪ್ರಶ್ನೆಗಳಿಗೂ ಸೂಕ್ತ ಮತ್ತು ಖಚಿತವಾದ ಉತ್ತರ ನೀಡುವಂತೆ ಪ್ರಭಾರ ಜಿಲ್ಲಾಧಿಕಾರಿ ಶೈಲಜಾ ತಿಳಿಸಿದರು.

ಜಿಲ್ಲೆಯಾದ್ಯಂತ 3169 ಗಣತಿ ಬ್ಲಾಕ್‌ಗಳನ್ನು ರಚಿಸಲಾಗಿದೆ. ಗಣತಿ ಕಾರ್ಯಕ್ಕೆ 1926 (176 ಮೀಸಲು) ಗಣತಿದಾರರು ಹಾಗೂ 320 (28 ಮೀಸಲು) ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದು ತಿಳಿಸಿದರು. ಜಿಲ್ಲಾ ನೋಡಲ್ ಅಧಿಕಾರಿ ಜಿ. ಪ್ರಕಾಶ್, ಹೆಚ್ಚುವರಿ ಜಿಲ್ಲಾ ಜನಗಣತಿ ಅಧಿಕಾರಿ ಚಿಕ್ಕಸುಬ್ಬಯ್ಯ, ಕಂದಾಯ ನಿರೀಕ್ಷಕ ರಾಜಣ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.