ADVERTISEMENT

ಟೋಯೊಟಾ: ಬೀಗಮುದ್ರೆ ಘೋಷಣೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 10:55 IST
Last Updated 17 ಮಾರ್ಚ್ 2014, 10:55 IST

ರಾಮನಗರ: ಪ್ರಮುಖ ಕಾರು ತಯಾರಿಕಾ ಕಂಪೆನಿಗಳಲ್ಲಿ ಒಂದಾದ ಬಿಡದಿ ಬಳಿಯ ಟೋಯೊಟಾ ಕಿರ್ಲೋಸ್ಕರ್‌ ಮೋಟಾರ್‌ (ಟಿಕೆಎಂ) ಪ್ರೈ ಲಿಮಿಟೆಡ್‌ ಭಾನುವಾರ ‘ಲಾಕ್‌ಔಟ್‌’ ಘೋಷಿಸಿದೆ.

ಕಾರ್ಮಿಕರು ಮತ್ತು ಆಡಳಿತ ಮಂಡಳಿ ನಡುವಣ ತಿಕ್ಕಾಟದಿಂದಾಗಿ ಕಂಪೆನಿಗೆ ಬೀಗ ಬಿದ್ದಿದೆ. ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಂಪೆನಿಯ ಕಾರ್ಮಿಕರು ಮಾಡುತ್ತಿದ್ದ ಪ್ರತಿಭಟನೆಯೇ ಬೀಗಮುದ್ರೆಗೆ (ಲಾಕ್‌ಔಟ್‌ಗೆ) ಕಾರಣ ಎಂದು ಗೊತ್ತಾಗಿದೆ. ಕಂಪೆನಿಯ ಈ ನಿರ್ಧಾರದಿಂದ 4,000 ಕಾಯಂ ನೌಕರರು ಸೇರಿದಂತೆ ಒಟ್ಟು 6,100 ನೌಕರರು ಬೀದಿಗೆ ಬಿದ್ದಂತಾಗಿದೆ.
ಕಂಪೆನಿಯ 16 ಘಟಕಗಳ ಪೈಕಿ ಟಿಕೆಎಂ ಮುಖ್ಯ ಘಟಕವಾಗಿದ್ದು, ಇಲ್ಲಿಯೇ ಕಾರು ತಯಾರಿಕೆ ನಡೆ­ಯುವುದು. ಟಿಕೆಎಂಗೆ ಬೀಗ ಹಾಕಿದ್ದರಿಂದ ಅದನ್ನೇ ಅವಲಂಭಿಸಿದ್ದ ಇತರ 15 ಉಪ ಘಟಕಗಳ ತಯಾ­ರಿಕಾ ಚಟುವಟಿಕೆಗೆ ಧಕ್ಕೆ ಎದುರಾಗಲಿದ್ದು, ಅಂದಾಜು 12 ಸಾವಿರ ನೌಕರರ ಕೆಲಸಕ್ಕೆ ಕುತ್ತು ಎದುರಾಗಬಹುದು ಎಂದು ಅಂದಾಜಿಸಲಾಗಿದೆ.

ಕಂಪೆನಿಯ ಆಡಳಿತ ಮಂಡಳಿಯು ಭಾನುವಾರ ಮಧ್ಯಾಹ್ನ ‘ಲಾಕ್ಔಟ್’ ಘೋಷಿಸಿದೆ. ಅಗತ್ಯ ಸೇವಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿ­ಕರನ್ನು ಹೊರತುಪಡಿಸಿ, ಉಳಿದ ಎಲ್ಲಾ ಕಾರ್ಮಿಕರಿಗೆ ಕಂಪೆನಿ ಮುಚ್ಚಿರುವುದಾಗಿ ನೋಟಿಸ್‌ನಲ್ಲಿ ತಿಳಿಸ­ಲಾಗಿದೆ ಎಂದು ಗೊತ್ತಾಗಿದೆ.

ವೇತನ ಹೆಚ್ಚಳ, ದುಡಿಮೆ ಅವಧಿ ಕಡಿತ, ದುಡಿಮೆಯ ಒತ್ತಡ ಕಡಿತ, ದುಡಿಮೆಯ ಉತ್ತಮ ವಾತಾ­ವರಣ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಂಪೆನಿಯ ಕಾರ್ಮಿಕರು ಕೆಲ ದಿನಗಳಿಂದ ಹೋರಾಟ ನಡೆಸುತ್ತಿದ್ದರು. ಈ ನಿಟ್ಟಿನಲ್ಲಿ ಕಂಪೆನಿಯ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಸಂಘಟನೆಗಳ ನಡುವೆ ಕೆಲ ಬಾರಿ ಮಾತುಕತೆ ನಡೆಯಿತಾದರೂ, ಅದು ವಿಫಲ­ವಾಗಿದ್ದರಿಂದ ಕಂಪೆನಿ ಅಂತಿಮವಾಗಿ ‘ಲಾಕ್‌ಔಟ್‌’ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ.

ಮುಖ್ಯ ದ್ವಾರದಲ್ಲಿ ನೋಟಿಸ್‌: ಕಂಪೆನಿಯು ಮುಖ್ಯ ದ್ವಾರದಲ್ಲಿ ಅಂಟಿಸಿರುವ ‘ಲಾಕ್‌ಔಟ್‌’ ನೋಟಿಸ್‌ನಲ್ಲಿ ‘2014ರ ಫೆ 10ರಿಂದ ಮಾರ್ಚ್‌ 15ರವರೆಗೆ ಸುಮಾರು 22 ದಿನಗಳ ಕಾಲ ಕಾರ್ಮಿಕರು ತಯಾರಿಕೆಯಲ್ಲಿ ಮಾಡಿದ ವಿಳಂ­ಬದಿಂದಾಗಿ ಕಾರಿನ ತಯಾರಿಕೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಇದರಿಂದ ಕಂಪೆನಿಗೆ ತೀವ್ರ ನಷ್ಟ ಉಂಟಾಗಿದೆ. ಜತೆಗೆ ಕಾರ್ಮಿಕರು ಆಡಳಿತ ಮಂಡ­ಳಿಯ ಮೇಲೆ ದಬ್ಬಾಳಿಕೆ ನಡೆಸಿದ್ದು, ಭಯದ ವಾತಾ­ವ­ರಣದಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡಿದ್ದಾರೆ.


ಕಾರ್ಮಿಕರು ಮೇಲ್ವಿಚಾರಕರನ್ನು ಹೆದರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಯಾರಿಕೆಗೆ ದೊಡ್ಡ ಪ್ರಮಾಣದಲ್ಲಿ ಧಕ್ಕೆಯಾಗಿದೆ. ಆದ್ದರಿಂದ ಅನಿರ್ದಿಷ್ಟಾವಧಿವರೆಗೆ ಕಂಪೆನಿಯನ್ನು ಮುಚ್ಚಲಾಗಿದೆ’ ಎಂದು ಕಂಪೆನಿಯ ಉಪ ವ್ಯವಸ್ಥಾಪಕ ನಿರ್ದೇಶಕ (ಡಿಎಂಡಿ) ಎಂ.ತಕಹಾಸಿ  ನೋಟಿಸ್‌ನಲ್ಲಿ ಹೇಳಿದ್ದಾರೆ.

ಕಂಪೆನಿಯ ನೌಕರರಿಗೆ ಎಸ್‌ಎಂಎಸ್‌ ಮೂಲಕ ‘ಲಾಕ್‌ಔಟ್‌’ ವಿಷಯವನ್ನು ತಿಳಿಸಲಾಗಿದೆ. ಈ ವಿಷಯ ತಿಳಿದ ಕಂಪೆನಿಯ ಬಹುತೇಕ ನೌಕರರು ಆತಂಕಗೊಂಡಿದ್ದಾರೆ.

ಕಾನೂನು ಬಾಹಿರ: ಟಿಕೆಎಂ ಕಂಪೆನಿಯು ಕಾನೂನು ಬಾಹಿರವಾಗಿ ‘ಲಾಕ್‌ಔಟ್‌’ ಘೋಷಿಸಿದೆ. ಇದರಿಂದ ಸಾವಿರಾರು ನೌಕರರಿಗೆ ತೊಂದರೆಯಾಗಿದ್ದು, ಕಂಪೆನಿಯ ಆಡಳಿತ ಮಂಡಳಿ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಟಿಕೆಎಂ ಕಾರ್ಮಿಕರ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯಾವುದೇ ಕಂಪೆನಿಯು ಲಾಕ್‌ಔಟ್‌ ಘೋಷಿಸುವ ಮುನ್ನ ಅಲ್ಲಿನ ಕಾರ್ಮಿಕ ಸಂಘಟನೆ ಮತ್ತು ಕಾರ್ಮಿಕ ಇಲಾಖೆಗೆ 15 ದಿನ ಮುಂಚಿತವಾಗಿ ನೋಟಿಸ್‌ ನೀಡಿ ಕಾರಣ ತಿಳಿಸಬೇಕು. ಆದರೆ ಟಿಕೆಎಂ ಈ ಬಗ್ಗೆ ನೋಟಿಸ್‌ ನೀಡದೆ ಕಾನೂನು ಉಲ್ಲಂಘಿಸಿದೆ’ ಎಂದರು.

‘ ಕಂಪೆನಿಯಲ್ಲಿ ಕಾರ್ಮಿಕ ಸ್ನೇಹಿ ವಾತಾವರಣವೇ ಇಲ್ಲ. ಕಾರ್ಯ ಒತ್ತಡ ತೀರ ಇದೆ. ಶೌಚಾಲಯಕ್ಕೆ ಹೋಗಲು ಅನುಮತಿ ಕೇಳಬೇಕು. 10 ನಿಮಿಷದಲ್ಲಿ ವಾಪಸು ಬಾರದಿದ್ದರೆ ವೇತನ ಕಡಿತ ಮಾಡಲಾಗುತ್ತದೆ. ಇವುಗಳನ್ನು ಸರಿಪಡಿಸುವಂತೆ ಕೋರಿದರೆ ಆಡಳಿತ ಮಂಡಳಿ ಲಾಕ್‌ಔಟ್‌ ಘೋಷಿಸಿದೆ. ಈ ವಿಷಯವನ್ನು ಸೋಮವಾರವೇ ಕಾರ್ಮಿಕ ಇಲಾಖೆ ಆಯುಕ್ತರು ಮತ್ತು ಸಚಿವರಿಗೆ ತಿಳಿಸುತ್ತೇವೆ. ಸರ್ಕಾರ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡುತ್ತೇವೆ’ ಎಂದು ಅವರು ಹೇಳಿದರು.

‘ಟಿಕೆಎಂನಲ್ಲಿ ದಿನಕ್ಕೆ 700 ವಿವಿಧ ಬಗೆಯ ಕಾರುಗಳು ತಯಾರು ಆಗುತ್ತವೆ. ಇತ್ತೀಚೆಗೆ ಮಾರುಕಟ್ಟೆ ಕುಸಿತದಿಂದ ಹೆಚ್ಚು ಕಾರುಗಳ ತಯಾರಿಕೆಯಲ್ಲಿ ದಿನಕ್ಕೆ ಸುಮಾರು 120 ಕಡಿಮೆಯಾಗಿದೆ. ಅದಕ್ಕೆ ಕಾರ್ಮಿಕರು ಕಾರಣರಲ್ಲ, ಕಂಪೆನಿಯ ನೀತಿಗಳು ಕಾರಣ’ ಎಂದು ಅವರು ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಕಾರ್ಮಿಕ ಅಧಿಕಾರಿ ನಾಗರಾಜು, ‘ಟಿಕೆಎಂನಲ್ಲಿ ಕಾರ್ಮಿಕರು ಮತ್ತು ಆಡಳಿತ ಮಂಡಳಿ ನಡುವೆ ಕೆಲ ದಿನಗಳಿಂದ ತಿಕ್ಕಾಟ ನಡೆಯುತ್ತಿದೆ. ಸಮಸ್ಯೆ ಪರಿಹರಿಸುವ ಉದ್ದೇಶದಿಂದ ಎರಡು– ಮೂರು ಬಾರಿ ಸಭೆ ಕೂಡ ನಡೆದಿದೆ. ಆದರೆ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವೆ ಹೊಂದಾಣಿಕೆ ಕಂಡು ಬಂದಿಲ್ಲ. ಇದೀಗ ಟಿಕೆಎಂ ಲಾಕ್‌ಔಟ್‌ ಘೋಷಿಸಿದೆ.

ಇದರ ಪರಿಣಾಮ ಸಾವಿರಾರು ಕಾರ್ಮಿಕರ ಮೇಲೆ ಆಗಲಿದ್ದು, ಕಾರ್ಮಿಕ ಇಲಾಖೆ ಮಧ್ಯ ಪ್ರವೇಶಿಸಿ ಸಮಸ್ಯೆ ಪರಿಹರಿಸಲು ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT