ADVERTISEMENT

ಡಿಕೆಶಿ ಅಲೆಯೊಳಗೆ ಪುಟಿದೇಳುತ್ತ ಜೆಡಿಎಸ್‌?

ಕನಕಪುರ ವಿಧಾನಸಭಾ ಕ್ಷೇತ್ರ; ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿ – ಏರುತ್ತಿದೆ ಚುನಾವಣಾ ಕಾವು

ಆರ್.ಜಿತೇಂದ್ರ
Published 8 ಮೇ 2018, 14:10 IST
Last Updated 8 ಮೇ 2018, 14:10 IST

ರಾಮನಗರ: ನಂಜುಂಡಪ್ಪ ಆಯೋಗದ ವರದಿಯ ಪ್ರಕಾರ ರಾಜ್ಯದಲ್ಲಿಯೇ ಹಿಂದುಳಿದ ತಾಲ್ಲೂಕುಗಳಲ್ಲಿ ಕನಕಪುರ ಸಹ ಒಂದು. ಆದರೆ ರಾಜ್ಯ ರಾಜಕಾರಣದಲ್ಲಿ ಮಾತ್ರ ಈ ತಾಲ್ಲೂಕು ಮುಂಚೂಣಿಯಲ್ಲಿದೆ. ಸದ್ಯ ಇಲ್ಲಿಯೂ ಚುನಾವಣೆಯ ಕಾವು ಏರುತ್ತಿದೆ.

2008ರ ಕ್ಷೇತ್ರ ಪುನರ್ ವಿಂಗಡನೆಯ ಬಳಿಕ ಕನಕಪುರ ಕ್ಷೇತ್ರಕ್ಕೆ ಸಾತನೂರು ಸೇರಿಕೊಂಡಿದೆ. ಆ ಕ್ಷೇತ್ರದಿಂದ ಇಲ್ಲಿಗೆ ವಲಸೆ ಬಂದ ಡಿ.ಕೆ. ಶಿವಕುಮಾರ್‌ ತಮ್ಮ ಗೆಲುವಿನ ಸವಾರಿ ಮುಂದುವರಿಸುವ ಆಶಯ ಹೊತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಸತತ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರು ಮತ್ತೊಂದು ಗೆಲುವಿನ ಕಾತರದಲ್ಲಿ ಇದ್ದಾರೆ. ಜೆಡಿಎಸ್‌ ತನ್ನ ಅಭ್ಯರ್ಥಿಯಾಗಿ ನಾರಾಯಣ ಗೌಡರನ್ನು ಕಣಕ್ಕೆ ಇಳಿಸಿದ್ದರೆ, ಬಿಜೆಪಿ ನಂದಿನಿ ಗೌಡರನ್ನು ಅಭ್ಯರ್ಥಿಯನ್ನಾಗಿಸಿದೆ.

ಕನಕಪುರ ಪಟ್ಟಣದ ಜೊತೆಗೆ ಕಸಬಾ, ಸಾತನೂರು, ಉಯ್ಯಂಬಳ್ಳಿ, ಕೋಡಿಹಳ್ಳಿ ಹೋಬಳಿಗಳು ಈ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಇಲ್ಲಿಗೆ ‘ಪ್ರಜಾವಾಣಿ’ ಭೇಟಿ ಕೊಟ್ಟು ಮತದಾರರ ಇಂಗಿತವನ್ನು ಅರಿಯುವ ಪ್ರಯತ್ನ ಮಾಡಿತು. ಈ ಸಂದರ್ಭ ಕಂಡುಕೊಂಡಂತೆ ಹೆಚ್ಚಿನ ಭಾಗದಲ್ಲಿ ಕಾಂಗ್ರೆಸ್ ಅಲೆ ಇದ್ದರೆ, ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಬಗ್ಗೆಯೂ ಅಲ್ಲಲ್ಲಿ ಮಾತುಗಳು ಕೇಳಿಬಂದಿತು.

ADVERTISEMENT

ಸದ್ಯ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ತಮ್ಮ ಕ್ಷೇತ್ರದಲ್ಲಿ ಈಗಾಗಲೇ ಅದ್ದೂರಿಯಾಗಿ ಪ್ರಚಾರ ನಡೆಸಿದ್ದಾರೆ. ಅವರ ಪತ್ನಿ ಉಷಾ ಸಹ ನಗರ ಪ್ರದೇಶದಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಹಳ್ಳಿ–ಹಳ್ಳಿಗಳನ್ನು ಕಾಂಗ್ರೆಸ್ ಕಾರ್ಯಕರ್ತರು ತಲುಪಿದ್ದು. ಶಿವಕುಮಾರ್ ಪರ ಮತಯಾಚನೆ ಮಾಡುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ಹಾಲಿ ಶಾಸಕರ ಕುರಿತು ಉತ್ತಮ ಅಭಿಪ್ರಾಯವಿದೆ. ಕ್ಷೇತ್ರದಾದ್ಯಂತ ಕಾಂಗ್ರೆಸ್ ಬಿಗಿ ಹಿಡಿತ ಹೊಂದಿರುವುದು ಅವರಿಗೆ ವರದಾನವಾಗಿದೆ. ಸಂಸದ ಡಿ.ಕೆ. ಸುರೇಶ್ ಕಾರ್ಯಕರ್ತರನ್ನು ಮುನ್ನಡೆಸುತ್ತಿದ್ದು, ಗೆಲುವಿಗೆ ತಂತ್ರ ರೂಪಿಸಿದ್ದಾರೆ.

ಅಭ್ಯರ್ಥಿ ಆಯ್ಕೆಯಲ್ಲಿನ ಗೊಂದಲಗಳಿಂದಾಗಿ ಜೆಡಿಎಸ್‌ ಹಾಗೂ ಬಿಜೆಪಿ ಪ್ರಚಾರದಲ್ಲಿ ಹಿಂದೆ ಬಿದ್ದಿದ್ದು, ಕಡೆಯ ದಿನಗಳಲ್ಲಿ ಮತದಾರರ ಓಲೈಕೆಗೆ ಕಸರತ್ತು ನಡೆಸಿವೆ. ಜೆಡಿಎಸ್‌ನಿಂದ ಡಿ.ಎಂ. ವಿಶ್ವನಾಥ್‌ ಅಭ್ಯರ್ಥಿಯಾಗುತ್ತಾರೆ ಎಂದು ಆರಂಭದಲ್ಲಿ ಸುದ್ದಿ ಹಬ್ಬಿತ್ತು. ಆದರೆ ನಂತರದಲ್ಲಿ ನಾರಾಯಣ ಗೌಡರು ಆ ಸ್ಥಾನಕ್ಕೆ ಬಂದಿದ್ದಾರೆ.

ಕನಕಪುರವು ಒಂದು ಕಾಲದಲ್ಲಿ ಜೆಡಿಎಸ್ ಭದ್ರಕೋಟೆ ಆಗಿತ್ತು. ಜನತಾದಳ ಹಾಗೂ ಜೆಡಿಎಸ್ ಮುಖಂಡ ಪಿಜಿಆರ್ ಸಿಂಧ್ಯಾ ಇಲ್ಲಿಂದಲೇ ಸತತ ಆರು ಬಾರಿ ಶಾಸಕರಾಗಿ ಆಯ್ಕೆಯಾದ ಕೀರ್ತಿ ಹೊಂದಿದವರು. ಈಗಲೂ ಇಲ್ಲಿನ ಕೆಲವು ಭಾಗದಲ್ಲಿ ಜೆಡಿಎಸ್ ಪರವಾದ ಅಭಿಪ್ರಾಯವಿದೆ. ಆದರೆ ಚುನಾವಣೆ ಘೋಷಣೆಯಾದ ಮೇಲೆ ಪಕ್ಷದ ವರಿಷ್ಠರಾದ ಎಚ್‌.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಕ್ಷೇತ್ರಕ್ಕೆ ಕಾಲಿಡದೇ ಇರುವುದು ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿದೆ. ಈ ನಡುವೆಯೂ ಹಳ್ಳಿಗಳಲ್ಲಿ ಹೆಚ್ಚು ಪ್ರಚಾರ ನಡೆದಿದೆ.

ಬಿಜೆಪಿಯಲ್ಲಿ ಕೂಡ ಇಂತಹದ್ದೇ ಪರಿಸ್ಥಿತಿ ಇದೆ. ನಂದಿನಿ ಗೌಡ ಸಹ ಕಡೆಯ ದಿನದಲ್ಲಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದವರು. ಅವರಿಗೂ ಸ್ಥಳೀಯ ಮುಖಂಡರಿಗೂ ಇರುವ ಭಿನ್ನಾಭಿಪ್ರಾಯದಿಂದಾಗಿ ಬಿಜೆಪಿ ಪ್ರಚಾರದಲ್ಲಿ ಹಿಂದೆ ಬಿದ್ದಿದೆ. ರಾಷ್ಟ್ರೀಯ–ರಾಜ್ಯ ನಾಯಕರು ಕ್ಷೇತ್ರದತ್ತ ಮುಖ ಮಾಡಿಲ್ಲ. ಈ ಎಲ್ಲದರ ನಡುವೆಯೂ ಅವರು ಛಲ ಬಿಡದೇ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೆಚ್ಚೆಚ್ಚು ಮತದಾರರನ್ನು ತಲುಪುವ ಪ್ರಯತ್ನದಲ್ಲಿ ಇದ್ದಾರೆ.
ಪಕ್ಷೇತರರು ಕ್ಷೇತ್ರದಲ್ಲಿ ತಕ್ಕಮಟ್ಟಿಗೆ ತಮ್ಮದೇ ಶೈಲಿಯಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಅಂತಿಮವಾಗಿ 11 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಕನಕಪುರ ಕ್ಷೇತ್ರ ವಿಶೇಷಗಳು
2008ರ ಕ್ಷೇತ್ರ ಪುನರ್‌ವಿಂಗಡನೆ ಬಳಿಕ ಕನಕಪುರ ಹಾಗೂ ಸಾತನೂರು ಕ್ಷೇತ್ರಗಳು ಜೊತೆಯಾಗಿ, ಕನಕಪುರ ಮಾತ್ರ ಉಳಿದುಕೊಂಡಿತು
ಕ್ಷೇತ್ರ ಪುನರ್ ವಿಂಗಡನೆ ನಂತರ ಕಾಂಗ್ರೆಸ್‌ ಇಲ್ಲಿ ಹಿಡಿತ ಸಾಧಿಸಿದೆ
ಅತಿ ಹೆಚ್ಚು ಬಾರಿ ಇಲ್ಲಿಂದ ಆಯ್ಕೆಯಾಗಿರುವ ಕೀರ್ತಿ ಪಿಜಿಆರ್ ಸಿಂಧ್ಯಾ ಅವರದ್ದು
ಬಿಜೆಪಿಗೆ ಇಲ್ಲಿ ಇನ್ನು ಗೆಲುವಿನ ಖಾತೆ ತೆರೆಯಲು ಆಗಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.