ADVERTISEMENT

ತಾಲ್ಲೂಕು ಕಚೇರಿ ಎದುರು ಧರಣಿ

ಅಕ್ರಮವಾಗಿ ನೀರು ಬಳಕೆ ಆರೋಪ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 8:52 IST
Last Updated 17 ಡಿಸೆಂಬರ್ 2013, 8:52 IST

ಚನ್ನಪಟ್ಟಣ: ಗ್ರಾಮದ ಸಾರ್ವಜನಿಕ ಕಟ್ಟೆಯಲ್ಲಿರುವ ನೀರನ್ನು ಗ್ರಾಮದ ಗ್ರಾಮ ಸಹಾಯಕರೊಬ್ಬರು ಅಕ್ರಮ ವಾಗಿ ತಮ್ಮ ತೋಟಕ್ಕೆ ಬಳಸಿಕೊಳ್ಳು ತ್ತಿದ್ದು, ಇದರಿಂದ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ತೊಂದರೆ ಅನು ಭವಿಸುವಂತಾಗಿದೆ ಎಂದು ಆರೋಪಿಸಿ ತಾಲ್ಲೂಕಿನ ಗೊಲ್ಲರದೊಡ್ಡಿ ಗ್ರಾಮಸ್ಥರು ಸೋಮವಾರ ಪಟ್ಟಣದ ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಿದರು.

ಗ್ರಾಮ ಸಹಾಯಕರಾಗಿರುವ ವ್ಯಕ್ತಿ ಸಾರ್ವಜನಿಕ ಕಟ್ಟೆಯ ನೀರನ್ನು ಬಳಸಿ ಕೊಳ್ಳುತ್ತಿರುವುದಲ್ಲದೆ ಇದನ್ನು ಕೇಳಲು ಹೋದರೆ ಜಾತಿ ನಿಂದನೆ ಕೇಸು ಹಾಕು ವುದಾಗಿ  ಬೆದರಿಸುತ್ತಾರೆ. ಈ ಬಗ್ಗೆ ತಹ ಶೀಲ್ದಾರ್‌ ಅವರಿಗೆ ದೂರು ನೀಡಲು ಹೋದರೆ ತಹಶೀಲ್ದಾರ್ ಶಿವರುದ್ರಪ್ಪ ಅವರು ಕೆರೆ–ಕಟ್ಟೆಗಳಿಗೂ ನನಗೂ ಸಂಬಂಧವಿಲ್ಲ, ಇದು ತಾಲ್ಲೂಕು ಪಂಚಾ ಯಿತಿಗೆ ಸೇರಿದ್ದು, ನೀವು ಅಲ್ಲಿಗೆ ತೆರಳಿ ಎಂದು ಉಡಾಫೆಯ  ಉತ್ತರ ನೀಡು ತ್ತಾರೆ ಎಂದು ಧರಣಿ ನಿರತರು ಆರೋಪಿಸಿದರು.

ನಮಗೆ ನ್ಯಾಯ ಕೊಡಿಸಬೇಕಾದವರೆ ಈ ರೀತಿ ಮಾಡಿದರೆ ನ್ಯಾಯಕ್ಕಾಗಿ ನಾವು ಯಾರ ಬಳಿ ನ್ಯಾಯ ಕೇಳುವುದು, ನಮ್ಮ ಸಮಸ್ಯೆಗೆ ಸ್ಪಂದಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಸಿದರು.

ನಂತರ ತಹಶೀಲ್ದಾರ್‌ ಶಿವರುದ್ರಯ್ಯ ಹಾಗೂ ತಾ.ಪಂ. ಕಾರ್ಯನಿ ರ್ವಹಣಾಧಿಕಾರಿ ರವಿಕುಮಾರ್, ಬಿ.ವಿ.ಹಳ್ಳಿ ಗ್ರಾ.ಪಂ.ಅಧ್ಯಕ್ಷ ಗಿರೀಶ್‌ ಬಾಬು ಅವರು ಧರಣಿ ನಿರತ  ಮುಖಂ ಡರೊಂದಿಗೆ ಈ ಬಗ್ಗೆ ಸಭೆ ನಡೆಸಿದರು.

ತಹಶೀಲ್ದಾರ್‌ ಶಿವರುದ್ರಯ್ಯ, ಈ ಕುರಿತು ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆನಂತರ ಗ್ರಾಮಸ್ಥರು ಧರಣಿ ಕೈಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.