ಕುದೂರು(ಮಾಗಡಿ): ಕಳೆದ ಎರಡು ದಿನಗಳಿಂದ ತಾಲ್ಲೂಕಿನಾದ್ಯಂತ ಮಳೆ ಸುರಿಯುತ್ತಿದೆ, ಕಾಗಿಮಡು ಗೇಟ್ ಬಳಿ ಮಳೆಯ ನೀರು ನಿಂತು ಚಿಕ್ಕಹೊನ್ನಮ್ಮ ಅವರ ತೋಟದಲ್ಲಿ ಬೆಳೆದಿದ್ದ ಕೊತ್ತುಂಬರಿ ಸೊಪ್ಪಿನ ಬೆಳೆ ಸಂಪೂರ್ಣವಾಗಿ ಜಲಾವೃತವಾಗಿದೆ.
ಮಾಗಡಿ ಸಮೀಪದ ವ್ಯಾಸರಾಯನ ಪಾಳ್ಯದ ಸುತ್ತಮುತ್ತಲಿನ ರೈತರ ಅಡಿಕೆ ಮತ್ತು ಸೊಪ್ಪಿನ ತೋಟಗಳಿಗೆ ನುಗ್ಗಿರುವ ನೀರು ತೊರೆಯಂತೆ ಹರಿದು ಬೆಳೆ ನಷ್ಟವಾಗಿದೆ. ಅಡಿಕೆ ತೋಟಗಳು, ಸೊಪ್ಪಿನಗದ್ದೆ, ತರಕಾರಿ ತೋಟಗಳು ನೀರಿನಲ್ಲಿ ಮುಳುಗಿವೆ.
ಶುಕ್ರವಾರ ರಾತ್ರಿ ಮಳೆ ಸುರಿಯುತ್ತಿದೆ. ಮಳೆರಾಯನ ಕರುಣೆಯಿಂದ ತಾಲ್ಲೂಕಿನ ಕೆರೆಕಟ್ಟೆಗಳೆಲ್ಲ ತುಂಬಿವೆ, ಹೆಚ್ಚಿನ ಮಳೆಯಾದರೆ ಅತಿವೃಷ್ಟಿಯಾಗುವ ಸಾಧ್ಯತೆ ಇದೆ ಎಂದು ವಯಲಗಂ ತರಕಾರಿ ಬೆಳೆಗಾರರ ಸಂಘದ ಅಧ್ಯಕ್ಷ ಗಂಗನರಸಿಂಹಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.
ಹೊಂಬಾಳಮ್ಮನಪೇಟೆ, ವ್ಯಾಸರಾ ಯನ ಪಾಳ್ಯ, ಪರಂಗಿಚಿಕ್ಕನ ಪಾಳ್ಯ ಇತರೆಡೆಗಳಲ್ಲಿ ಮಳೆಗೆ ಸಿಲುಕಿ ತರಕಾರಿ ಬೆಳೆಗಾರರಿಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ದಾನ್ ಫೌಂಡೇಷನ್ ತರಕಾರಿ ಬೆಳೆಗಾರರ ಮಹಿಳಾ ಸಂಘ ತಿಳಿಸಿದೆ.
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತರಕಾರಿ ಬೆಳೆಗೂ ಹಾನಿಯಾಗಿದೆ. ಬೆಳೆ ಕಳೆದುಕೊಂಡಿರುವ ತರಕಾರಿ ಬೆಳೆಗಾರರಿಗೆ ಪರಿಹಾರ ನೀಡುವಂತೆ ತರಕಾರಿ ಬೆಳೆಗಾರರ ಸಂಘ ಮನವಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.