ADVERTISEMENT

ದೇಗುಲಗಳು ನೆಮ್ಮದಿ ತಾಣಗಳಾಗಲಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 19:30 IST
Last Updated 3 ಫೆಬ್ರುವರಿ 2012, 19:30 IST

ಮಾಗಡಿ: ದೇವರ ಮೇಲಿನ ಭಕ್ತಿಯಿಂದ ಜೀವನದಲ್ಲಿ ಎದುರಾಗುವ ಭಯ ದೂರವಾಗುತ್ತದೆ. ಆದ್ದರಿಂದ ದೇವಾಲಯಗಳು ಮನುಷ್ಯರಿಗೆ ನೆಮ್ಮದಿ ನೀಡುವ ತಾಣಗಳಾಗಬೇಕು ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಅಭಿಪ್ರಾಯಪಟ್ಟರು.

ಅವರು ಕುದೂರು ಹೋಬಳಿಯ ಲಕ್ಕಯ್ಯನ ಪಾಳ್ಯದಲ್ಲಿ ನೂತನವಾಗಿ ನಿರ್ಮಿಸಿರುವ ಗಣಪತಿ, ಆಂಜನೇಯ, ಮಹೇಶ್ವರಿ ಅಮ್ಮನವರ ದೇಗುಲಗಳನ್ನು ಉದ್ಘಾಟಿಸಿ ಮಾತನಾಡಿದರು.

ಬರಿ ಹೊಸ ದೇಗುಲಗಳನ್ನು ಕಟ್ಟಿದರೆ ಸಾಲದು. ನಿತ್ಯ ಪೂಜೆ, ಹಬ್ಬ ಹರಿದಿನಗಳಲ್ಲಿ ದಾಸೋಹ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದರ ಜೊತೆಗೆ, ನಮ್ಮ ನಡೆ ನುಡಿಯಲ್ಲೂ ಸತ್ಯ, ಅಹಿಂಸೆ, ತ್ಯಾಗಜೀವನ, ಸಕಲ ಚರಾಚರ ಪ್ರಾಣಿಪಕ್ಷಿಗಳಲ್ಲಿ ದಯಾ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಜಿ.ಪಂ. ಸದಸ್ಯ ಎಂ.ಕೆ.ಧನಂಜಯ ಮಾತನಾಡಿ, ನಮ್ಮ ಪೂರ್ವಿಕರು ಪರಿಸರದಲ್ಲಿ ದೇವರನ್ನು ಕಂಡುಕೊಂಡಿದ್ದರು. ಆದ್ದರಿಂದ ಪರಿಸರ ಸಂರಕ್ಷಣೆಯ ಕಡೆ ಹೆಚ್ಚಿನ ಗಮನಹರಿಸುವಂತೆ ಅವರು ತಿಳಿಸಿದರು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ರಾಮಣ್ಣ, ಜಿ.ಪಂ. ಮಾಜಿ ಸದಸ್ಯ ವೀರಪ್ಪ, ತಾ.ಪಂ. ಮಾಜಿ ಸದಸ್ಯ ಕೆ.ಜಿ.ಉದ್ದೀಶ್ ದೇವರು ಮತ್ತು ಧರ್ಮದ ಬಗ್ಗೆ ಮಾತನಾಡಿದರು.

ಶ್ರೀಗಿರಿಪುರ ಗ್ರಾ.ಪಂ. ಅಧ್ಯಕ್ಷ ಪ್ರಕಾಶ್,  ಹಿರಿಯ ಕಲಾವಿದ ಬಣ್ಣದ ಹನುಮಂತರಾಯಪ್ಪ,  ಚಿಕ್ಕಮಸ್ಕಲ್ ಸಿದ್ದಲಿಂಗಪ್ಪ, ತಾ.ಪಂ. ಉಪಾಧ್ಯಕ್ಷ ನಾಗರಾಜು, ದೇಗುಲ ಸಮಿತಿಯ ಅಧ್ಯಕ್ಷ ಹನುಮಂತರಾಯಪ್ಪ, ತಾ.ಪಂ ಸದಸ್ಯೆ ಅನಿಸಾ ಖಾನುಂ,  ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ನರಸಿಂಹ ಮೂರ್ತಿ, ಸತ್ಯನಾರಾಯಣ್, ಕಾಗಿಮಡು ಹೊನ್ನಪ್ಪ ಉಪಸ್ಥಿತರಿದ್ದರು.

ಅದರಂಗಿ, ಕಾಗಿಮಡು, ಲಕ್ಕಯ್ಯನಪಾಳ್ಯ, ಶ್ರೀಗಿರಿಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.