ADVERTISEMENT

ನಗರಸಭೆಗೆ ಬಾಂಗ್ಲಾ ಅಧಿಕಾರಿಗಳ ಭೇಟಿ

ರಾಮನಗರ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 11:01 IST
Last Updated 12 ಡಿಸೆಂಬರ್ 2012, 11:01 IST

ರಾಮನಗರ: ಇಲ್ಲಿನ ನಗರಸಭೆಯ ಆಡಳಿತ ವೈಖರಿ ಮತ್ತು ಅನುಷ್ಠಾನಕ್ಕೆ ತರಲಾಗಿರುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಅಧ್ಯಯನ ನಡೆಸಲು ಬಾಂಗ್ಲಾ ದೇಶದ ಹಿರಿಯ ಅಧಿಕಾರಿಗಳ ತಂಡ ಮಂಗಳವಾರ ನಗರಕ್ಕೆ ಭೇಟಿ ಪರಿಶೀಲನೆ ನಡೆಸಿತು.

ಬಾಂಗ್ಲಾದ ಕೇಂದ್ರ ಸರ್ಕಾರದ ಪೌರಾಡಳಿತ ಇಲಾಖೆಯ ಜಂಟಿ ಕಾರ್ಯದರ್ಶಿ ನಯೀಂ ಅಹ್ಮದ್ ಖಾನ್ ನೇತೃತ್ವದಲ್ಲಿ ಎಂಟು ಸದಸ್ಯರು ಆಗಮಿಸಿದ್ದರು.

ತಂಡವನ್ನು ಬರಮಾಡಿಕೊಂಡ ನಗರಸಭೆಯ ಅಧ್ಯಕ್ಷ ಸಾಬಾನ್ ಸಾಬ್ ಮತ್ತು ಆಯುಕ್ತ ಚಿದಾನಂದ ಅವರು ನಗರಸಭೆಯ ಕಾರ್ಯವೈಖರಿಯನ್ನು ವಿವರಿಸಿದರು. ರಾಮನಗರದ ಇತಿಹಾಸ, ವಸತಿ ಪ್ರದೇಶ, ಜನಸಂಖ್ಯೆ, ನೀರು, ಸ್ವಚ್ಛತೆ, ನೈರ್ಮಲ್ಯ, ಬೀದಿದೀಪ ನಿರ್ವಹಣೆ, ಕಂದಾಯ ವಸೂಲಿ, ತೆರಿಗೆ ಸಂಗ್ರಹ, ಜಿಐಎಸ್, ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಮತ್ತು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಕೂಲಂಕಷ ಮಾಹಿತಿ ನೀಡಿದರು.

ಸಾರ್ವಜನಿಕ ಕುಂದು ಕೊರತೆ, ಜನನ ಮತ್ತು ಮರಣ ಪ್ರಮಾಣ ಪತ್ರ ವಿತರಿಸುವ ಆನ್‌ಲೈನ್ ತಂತ್ರಾಂಶ ಹಾಗೂ ನಗರಸಭೆ ವೆಬ್‌ಸೈಟ್ ಬಗ್ಗೆಯೂ ಈ ತಂಡ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿತು.

ನಂತರ ತಂಡವು ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ, ಕೊಳಚೆ ನೀರು ಶುದ್ಧೀಕರಣ ಘಟಕ, ಜಾನಪದ ಲೋಕಕ್ಕೆ ಭೇಟಿ ನೀಡಿತು.
ಈ ಸಂದರ್ಭದಲ್ಲಿ ನಗರಸಭೆಯ ವಿವಿಧ ಸದಸ್ಯರು ಉಪಸ್ಥಿತರ್ದ್ದಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.