ADVERTISEMENT

`ನೊಂದ ಜೀವಗಳಿಗೆ ಸಂಗೀತ ಔಷಧ'

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 6:33 IST
Last Updated 3 ಸೆಪ್ಟೆಂಬರ್ 2013, 6:33 IST

ರಾಮನಗರ: `ಇಂದಿನ ಯುವಜನಾಂಗ ಸಂಗೀತ ಕ್ಷೇತ್ರದ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ' ಎಂದು ಗಾಯಕ ಸಿ.ಎ. ಶಾಂತಕುಮಾರ್ ವಿಷಾದಿಸಿದರು.
ನಗರಸಭೆಯ ಪ್ರಶಸ್ತಿ ಭವನದಲ್ಲಿ ರೋಟರಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಸಂಗೀತ ಎಂದರೆ ಅದು ನೊಂದ ಮನಸ್ಸುಗಳ ಪಾಲಿಗೆ ದಿವ್ಯ ಔಷಧ. ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಸಾಂಪ್ರದಾಯಿಕ ವಿದ್ಯೆಗೆ ಪ್ರೋತ್ಸಾಹಿಸುವಂತೆಯೇ ಸಂಗೀತದ ಅಭ್ಯಾಸಕ್ಕೂ ಪ್ರೇರೇಪಿಸಬೇಕು' ಎಂದರು.

`ತಾಯಿಯ ಜೋಗುಳವೇ ಸಂಗೀತದ ಮೂಲಧಾತು. ಮಾನವ ತಾನು ಕಂಡುಂಡ ನೋವು, ನಲಿವುಗಳನ್ನು ಹಾಗೂ ತನ್ನ ದೈನಂದಿನ ಬದುಕಿನ ಎಲ್ಲ ಸುಖದುಃಖಗಳನ್ನೂ ಸಂಗೀತದಲ್ಲಿ ಕಾಣುತ್ತಾನೆ. ಸಂಗೀತದಿಂದ ಮಕ್ಕಳಲ್ಲಿ ಶಿಸ್ತು, ಸಂಯಮ, ನೆನಪಿನ ಶಕ್ತಿ, ತಾಳ್ಮೆ, ಸಹಕಾರ ಮನೋಭಾವ ಬೆಳೆಯುತ್ತದೆ. ಅಲ್ಲದೆ ವಿದ್ಯಾಭ್ಯಾಸದಲ್ಲಿ ಏಕಾಗ್ರತೆಯನ್ನು ಕಾಯ್ದುಕೊಳ್ಳಲೂ ಸಹಕಾರಿಯಾಗುತ್ತದೆ. ಮಾನವ ಇರುವವರೆಗೂ ಸಂಗೀತವು ಇರುತ್ತದೆ' ಎಂದು ತಿಳಿಸಿದರು.

`ಜಾಗತೀಕರಣದ ಜಾಲಕ್ಕೆ ಸಿಲುಕಿರುವ ಸಂಗೀತವು ವ್ಯಾವಹಾರಿಕವಾಗಿ ಮಾತ್ರವಲ್ಲದೆ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಭಾಷಿಕ ಪ್ರಹಾರಕ್ಕೂ ತುತ್ತಾಗಿದೆ. ಇದು ಸಂಗೀತದ ಬೆಳವಣಿಗೆಯನ್ನು ಬಿಕ್ಕಟ್ಟಿಗೆ ಸಿಲುಕಿಸಿದೆ. ಸಂಗೀತವನ್ನು ಕಲಿತರೆ ಭವಿಷ್ಯವನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎನ್ನುವಂತಹ ಭ್ರಮೆ ಇಂದು ಜನರನ್ನು ಆವರಿಸಿಕೊಂಡಿರುವುದರಿಂದ ನಾಡಿನ ಸಾಂಸ್ಕೃತಿಕ ಮತ್ತು ಸಾಮಾಜಿಕ ಅಂಶಗಳನ್ನು ಒಳಗೊಂಡಿರುವ ಸಂಗೀತ ಕಲಿಕೆಗೆ ಆತಂಕದ ವಾತಾವರಣ ನಿರ್ಮಾಣವಾಗುತ್ತಿದೆ' ಎಂದು ಅವರಯ ಆತಂಕ ವ್ಯಕ್ತಪಡಿಸಿದರು.

ರೋಟರಿ ಸಂಸ್ಥೆಯ ಅಧ್ಯಕ್ಷ ಆರ್.ಜಿ. ಚಂದ್ರಶೇಖರ್, ಕಾರ್ಯದರ್ಶಿ ಎಚ್.ಪಿ. ಮಹಾಲಿಂಗಯ್ಯ, ನಿರ್ದೇಕರಾದ ಆರ್.ಕುಮಾರಸ್ವಾಮಿ, ಸೌಮ್ಯ, ಸಿದ್ದೇಗೌಡ, ಪುಟ್ಟರಾಜು, ಎಚ್. ಚಂದ್ರಶೇಖರ್, ಗೋಪಾಲ್, ಬಿ. ರಾಮಕೃಷ್ಣಯ್ಯ, ಪುಟ್ಟಲಿಂಗೇಗೌಡ, ವಾಸು, ಮರಿಸ್ವಾಮಿ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.