ಕನಕಪುರ: ವಿಜ್ಞಾನ ಮುಂದುವರಿದಂತೆಲ್ಲಾ ಮನುಷ್ಯ ಮಾನವೀಯತೆ ಮರೆಯುತ್ತಿದ್ದಾನೆ. ಪರಸ್ಪರ ಪ್ರೀತಿ ವಿಶ್ವಾಸಗಳು ಮಾಯವಾಗುತ್ತಿವೆ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಾಯಪ್ಪ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ರೋಟರಿ ಭವನದಲ್ಲಿ ಸಂವೇದನಾ ಅಭಿವೃದ್ಧಿ ಟ್ರಸ್ಟ್ನ ಉದ್ಘಾಟನೆ ಹಾಗೂ ಅನಾಥ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿನ ಒಗ್ಗಟ್ಟಿನ ಸಹಬಾಳ್ವೆ ನಮ್ಮ ವೈಯಕ್ತಿಕ ಸ್ವಾರ್ಥ ಸಾಧನೆಗೆ ಸಿಲುಕಿ ಕಣ್ಮರೆಯಾಗುತ್ತಿದೆ. ಪ್ರತಿಯೊಬ್ಬರಲ್ಲೂ ಸಂವೇದನಾಶೀಲತೆ ಮೂಡಿದಾಗ ಮಾತ್ರ ಸಮಾಜದಲ್ಲಿ ಒಗ್ಗಟ್ಟಿನ ಸಹಬಾಳ್ವೆ ನಡೆಸಲು ಸಾಧ್ಯವೆಂದು ಅಭಿಪ್ರಾಯಪಟ್ಟರು.
ಮಹಿಳಾ ಹೋರಾಟಗಾರ್ತಿ ಸೌಮ್ಯ ಮಾತನಾಡಿ, ಇಂದು ಮಹಿಳೆಯರು ಗಂಡಸರಿಗೆ ಸರಿಸಮನಾಗಿ ನಿಲ್ಲುತ್ತಿದ್ದಾರೆ. ಆದರೂ ಮಹಿಳೆಯರ ಮೇಲಿನ ಶೋಷಣೆ, ಅತ್ಯಾಚಾರ, ವರದಕ್ಷಿಣೆ ಕಿರುಕುಳಗಳು ಕಡಿಮೆಯಾಗಿಲ್ಲವೆಂದು ವಿಷಾದಿಸಿದ ಅವರು ಮಹಿಳೆಯರು ಇನ್ನು ಹೆಚ್ಚು ಹೆಚ್ಚು ಸಂಘಟಿತರಾಗುವಂತೆ ಕರೆ ನೀಡಿದರು.
ತಹಸೀಲ್ದಾರ್ ದಾಕ್ಷಾಯಿಣಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಅನಾಥ ಮಕ್ಕಳಿಗೆ ಪುಸ್ತಕ ವಿತರಿಸಿದರು. ಸಂವೇದನಾ ಅಭಿವೃದ್ಧಿ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ನೀಲಿ ರಮೇಶ್, ಬಿಎಸ್ಪಿ ಜಿಲ್ಲಾ ಸಂಯೋಜಕ ಬಿ.ಅನ್ನದಾನಪ್ಪ, ಟ್ರಸ್ಟಿನ ಅಧ್ಯಕ್ಷೆ ಕೆ.ಸಿ. ಶೃತಿ ಪ್ರೇಮಕುಮಾರ್, ಎನ್.ಕುಮಾರ್, ಶಾಂತರಾಜು, ಎಂ.ಚಂದ್ರು, ವೆಂಕಟಾಚಲ, ಶಿವು, ಭಾಸ್ಕರ್, ವೀಣಾ, ಶಶಿಕಲಾ, ಚಂದ್ರಾಜ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.