ADVERTISEMENT

'ಮಾಗಡಿ ಸೀಮೆಯಲ್ಲಿ ಜೀವಂತಿಕೆ'

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 8:59 IST
Last Updated 30 ಅಕ್ಟೋಬರ್ 2017, 8:59 IST

ಮಾಗಡಿ: ಬೆಟ್ಟಗುಡ್ಡಗಳಿಂದ ಕೂಡಿರುವ ಮಾಗಡಿ ಸೀಮೆಯಲ್ಲಿ ಜೀವಂತಿಕೆ ಇದೆ ಎಂದು ಇತಿಹಾಸ ಸಂಶೋಧಕ ಡಾ.ಮುನಿರಾಜಪ್ಪ ತಿಳಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ‘ಇತಿಹಾಸ ಪರಂಪರೆ ಉಳಿಸಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ತಾಲ್ಲೂಕಿನ ಮೂಲ ಜನಪದ ಕಲೆಗಳನ್ನು ಜೀವಂತವಾಗಿ ಉಳಿಸಿಕೊಂಡಿರುವ ಆದಿವಾಸಿ ಇತರೆ ಕಲಾವಿದರಿದ್ದಾರೆ. ವಿದ್ಯಾರ್ಥಿಗಳು ಕಲೆ, ಸಂಸ್ಕೃತಿ, ಚರಿತ್ರೆ, ರೈತಾಪಿವರ್ಗದವರ ಶ್ರಮಜೀವನವನ್ನು ತಿಳಿದುಕೊಳ್ಳುವುದರಿಂದ ಜೀವನ ರೂಪಿಸಿಕೊಳ್ಳಬಹುದು. ಕಲ್ಯ ಗ್ರಾಮ  ಬಹುಸಂಸ್ಕೃತಿಗಳ ಸಂಗಮ ಭೂಮಿ, ತಾಲ್ಲೂಕಿನಲ್ಲಿ ಒಟ್ಟು 200 ಶಾಸನಗಳಿದ್ದು, ವೀರಗಲ್ಲುಗಳು ಮಾಸ್ತಿಕಲ್ಲುಗಳು ನಮ್ಮ ಪೂರ್ವಿಕರ ಬಹುದೊಡ್ಡ ಬದುಕನ್ನು ತಿಳಿಸುತ್ತಿವೆ’ ಎಂದರು.

ಕಲ್ಯದಲ್ಲಿರುವ ಜೈನ ಮಾನಸ್ತಂಭ ಮಾಗಡಿ ಸೀಮೆಯ ಹೊನ್ನಕಳಸವಿದ್ದಂತೆ. ಗೆಜಗಾರು ಗುಪ್ಪೆ ಹೊಯ್ಸಳ ದೊರೆಗಳ ಜೀವ ರಕ್ಷಕ ರಾಜಭಟರಿದ್ದ ಗ್ರಾಮ. ರಾಷ್ಟ್ರೀಯ ಮತ್ತು ಸ್ವಾತಂತ್ರ್ಯ ಚಳವಳಿಯಲ್ಲಿ ತಾಲ್ಲೂಕಿನ ಕೊಡುಗೆ ಅನನ್ಯವಾದುದು ಎಂದು ತಿಳಿಸಿದರು.

ADVERTISEMENT

‘ಸಿರಿಭೂವಲ’ ರಚಿಸಿದ ಕರಲಮಂಗಲ ಶ್ರೀಕಂಠಯ್ಯ, ‘ಭಾರತೀಯ ಸ್ತ್ರೀಪರ್ವ’ ರಚಿಸಿದ ತಿರುಮಲೆಯ ಶ್ರೀನಿವಾಸ ಕವಿ, ‘ಡೊಳ್ಳೋತ್ಸವ’ ರಚಿಸಿದ ಕೋರಮಂಗಲದ ಸೋಬಾನೆ ರಂಗದಾಸ ಮತ್ತು ಮೋಟಗೊಂಡನಹಳ್ಳಿ, ಮಾನಗಲ್‌, ಮಾಗಡಿಯ ಸಂಸ್ಕೃತ ವಿದ್ವಾಂಸರ ಕೊಡುಗೆ ಅನನ್ಯವಾದುದು ಎಂದು ವಿವರಿಸಿದರು.

ಸಾವನದುರ್ಗ, ಭೈರವನ ದುರ್ಗ, ಕೆಂಪಾಪುರದಲ್ಲಿ ಸ್ಮಾರಕಗಳಿವೆ. ಸಂಕೀಘಟ್ಟದ ವರ್ಧಮಾನ ಬಸದಿ, ಶರಣ ಮಠಗಳು, ಕೆಂಪೇಗೌಡರ ವಂಶಸ್ಥರು ನಿರ್ಮಿಸಿರುವ ಕೆರೆಕಟ್ಟೆ, ಗುಡಿಗೋಪುರಗಳಿವೆ. ಇವು ತಾಲ್ಲೂಕು ಪರಂಪರೆಯಲ್ಲಿ ಪ್ರಮುಖ ಸ್ಥಾನ ಪಡೆದಿವೆ ಎಂದು ತಿಳಿಸಿದರು.

ಇತಿಹಾಸ ಪ್ರಾಧ್ಯಾಪಕ ಡಾ.ತೋಪೇಶ್‌.,ನಿವೃತ್ತ ಪ್ರಾಂಶುಪಾಲ ರಮಾನಂದ, ಸಹಾಯಕ ಪ್ರಾಧ್ಯಾಪಕರಾದ ಎಚ್‌.ಆರ್‌.ಮೂರ್ತಿ, ತಿಮ್ಮಹನುಮಯ್ಯ, ಪ್ರೊ.ಪಿ,ನಂಜುಂಡ. ಸುಷ್ಮಾ ಮಾತನಾಡಿದರು. ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ.ಆರ್‌.ಕೆ.ರಮೇಶ್‌ ಬಾಬು ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.