ADVERTISEMENT

ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಸಲಹೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 19:30 IST
Last Updated 1 ಅಕ್ಟೋಬರ್ 2011, 19:30 IST

ಕನಕಪುರ: ಮನುಷ್ಯ ಮಾನವೀಯ ಮೌಲ್ಯಗಳನ್ನು ಬೆಳಸಿಕೊಂಡಾಗ ಮಾತ್ರ ಸಾರ್ಥಕ ಜೀವನ ಸಾಗಿಸಲು ಸಾಧ್ಯವೆಂದು ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ರಾಮಚಂದ್ರೇಗೌಡ ಹೇಳಿದರು. 

ತಾಲ್ಲೂಕಿನ ತೊಪ್ಪಗನಹಳ್ಳಿ ಗ್ರಾಮದಲ್ಲಿ `ಶೈನ್ ಮತ್ತು ಶೇಪ್~ ಸಂಸ್ಥೆಗಳು ನೂತನವಾಗಿ ನಿರ್ಮಿಸುತ್ತಿರುವ  ಧ್ಯಾನ ಮಂದಿರ, ಸೆಮಿನಾರ್ ಸಭಾಂಗಣದ ಶಿಲಾನ್ಯಾಸ ಸಮಾರಂಭ ಹಾಗೂ ತಾಲ್ಲೂಕಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ 60 ಉಚಿತ ವ್ಯಕ್ತಿತ್ವ ವಿಕಸನಾ ಕಾರ್ಯಗಾರದ ಉದ್ಘಾಟನಾ ಸಮಾರಂಭದಲ್ಲಿ  ಮಾತನಾಡಿದರು.
 
ಶಿಕ್ಷಕ ಎಷ್ಟೇ ವಿದ್ಯಾವಂತನಾಗಿದ್ದರೂ ಅವನು ಪ್ರತಿದಿನವೂ ಒಬ್ಬ ವಿದ್ಯಾರ್ಥಿಯಾಗಿಯೆ ಕಲಿಯುತ್ತಿರುತ್ತಾನೆ. ಎಷ್ಟೇ ಬುದ್ದಿವಂತನಾಗಿದ್ದರೂ ಅದನ್ನು ಹೇಗೆ, ಏಕೆ ಬಳಸಬೇಕೆಂಬುದನ್ನು ತಿಳಿಯಬೇಕು. ಆ ನಿಟ್ಟಿನಲ್ಲಿ ಗೊ.ನ.ಶೇಷಾದ್ರಿಯವರು ಗ್ರಾಮೀಣ ಪ್ರದೇಶ ಜನರ ಸೇವೆ ಮಾಡುವ ಮನೋಭಿಲಾಷೆಯಿಂದ ಇಲ್ಲಿಗೆ ಬಂದು ಧ್ಯಾನ ಮಂದಿರ ನಿರ್ಮಾಣ ಮಾಡಿ ಉಚಿತ ವ್ಯಕ್ತಿತ್ವ ವಿಕಸನ ಕಾರ್ಯಗಾರ ನಡೆಸುತ್ತಿದ್ದಾರೆ.
 

ಅದನ್ನು ಸ್ಥಳೀಯರು ಸದ್ಬಳಕೆ ಮಾಡಿಕೊಂಡು ಜ್ಞಾನವನ್ನು ವೃದ್ದಿಸಿಕೊಳ್ಳುವಂತೆ ಕರೆ ನೀಡಿದರು.
 ಸಮಾರಂಭದ ಅಧ್ಯಕ್ಷತೆವಹಿಸಿದ್ದ ಶಾಸಕ ಡಿ.ಕೆ.ಶಿವಕುಮಾರ್ ಮಾತನಾಡಿ, ನಾವು ವಿಶ್ವಮಟ್ಟದಲ್ಲಿ ಸ್ಪರ್ಧೆಯನ್ನು ನಡೆಸುತ್ತಿದ್ದು, ಸವಾಲುಗಳನ್ನು ಎದುರಿಸುತ್ತಿದ್ದೆೀವೆ.

ಅಂಥ ಸಮಾಜದಲ್ಲಿ ಮನುಷ್ಯನಲ್ಲಿರುವ ವ್ಯಕ್ತಿತ್ವವನ್ನು ವಿಕಸನಗೊಳಿಸಿ ಒಂದು ಸುಂದರ ಸಮಾಜವನ್ನು ನಿರ್ಮಾಣ ಮಾಡಲು ಹೊರಟಿರುವ ಶೈನ್ ಮತ್ತು ಶೇಪ್ ಸಂಸ್ಥೆಯವರಿಗೆ ಕ್ಷೇತ್ರದ ಒಬ್ಬ ಶಾಸಕನಾಗಿ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. 
 
ಶೈನ್ ಸಂಸ್ಥೆಯ ನಿರ್ದೇಶಕ ಗೊ.ನ.ಶೇಷಾದ್ರಿ ಮತ್ತು ಶೇಪ್ ಸಂಸ್ಥೆಯ ಅಧ್ಯಕ್ಷೆ ಲಲಿತಾ ಶೇಷಾದ್ರಿ ಮಾತನಾಡಿ, ಬೆಂಗಳೂರು ಸೇರಿದಂತೆ ದೇಶ ವಿದೇಶಗಳಲ್ಲಿ ಉಚಿತ ವ್ಯಕ್ತಿತ್ವ ವಿಕಸನಾ ಕಾರ್ಯಾಗಾರಗಳನ್ನು ನಡೆಸಿದ್ದೆೀವೆ, ಬೆಂಗಳೂರಿಗೆ ಸಮೀಪವಿರುವ ಕನಕಪುರ ತಾಲ್ಲೂಕಿನಲ್ಲಿ ಶಾಶ್ವತವಾಗಿ ಒಂದು ಧ್ಯಾನಮಂದಿರ ನಿರ್ಮಾಣ ಮಾಡಿ  ತಾಲ್ಲೂಕಿನ ಜನತೆಗೆ ಗುಣಾತ್ಮಕ ಜೀವನ ಕಲಿಸಿ ಒಂದು ಮಾದರಿ ತಾಲ್ಲೂಕು ಮಾಡುವ ಇಂಗಿತ ವ್ಯಕ್ತಪಡಿಸಿದರು. 
 
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಕನ್ಯ ರಂಗಸ್ವಾಮಿ, ತುಂಗಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಣ್ಣ, ಜಿಲ್ಲಾ ಶಿಕ್ಷಣಾಧಿಕಾರಿ ಪ್ರಹ್ಲಾದ್‌ಗೌಡ, ತಾಲ್ಲೂಕು    ಅಧಿಕಾರಿ ಶಿವರಾಮೇಗೌಡ, ಸಂಸ್ಥೆಯ ಪುರುಷೋತ್ತಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT