ADVERTISEMENT

ರಸ್ತೆಯಲ್ಲಿ ಒಳಚರಂಡಿಯ ನೀರು : ಜನರಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 9:00 IST
Last Updated 30 ಅಕ್ಟೋಬರ್ 2017, 9:00 IST

ರಾಮನಗರ: ಇಲ್ಲಿನ ವಿವೇಕಾನಂದ ನಗರದಲ್ಲಿ ನಿರ್ಮಾಣವಾಗಿರುವ ನೂತನ ಬಡಾವಣೆಯ ಕಲುಷಿತ ನೀರು ಹೊರಕ್ಕೆ ಹೋಗಲು ಸಂಪರ್ಕ ಕಲ್ಪಿಸಿಲ್ಲ. ಇದರಿಂದ ಒಳಚರಂಡಿ ನೀರು ರಸ್ತೆಯ ಮಧ್ಯದಲ್ಲಿ ಹರಿಯುತ್ತಿದ್ದು ಜನರು ಮೂಗು ಮುಚ್ಚಿ ತಿರುಗುವಂತಾಗಿದೆ.

ಕೆಲವು ವರ್ಷಗಳ ಹಿಂದೆ ನಿರ್ಮಾಣವಾದ ಹೊಸ ಬಡಾವಣೆಯಲ್ಲಿ ಒಳಚರಂಡಿ ವ್ಯವಸ್ಥೆ ಮಾಡಲಾಗಿದೆ. ಆದರೂ ಇದಕ್ಕೆ ನಗರಸಭೆ ವತಿಯಿಂದ ಸಂಪರ್ಕ ನೀಡಿಲ್ಲ. ಹೀಗಾಗಿ ಬಡಾವಣೆಯಲ್ಲಿ ನಿರ್ಮಾಣವಾಗಿರುವ ಮನೆಗಳ ಕಲುಷಿತ ನೀರು ಬಡಾವಣೆಯ ಹೊರಭಾಗದ ಚರಂಡಿಯಲ್ಲಿ ಬಂದು ನಿಲ್ಲುತ್ತಿದೆ. ಇದರಿಂದ ಸುತ್ತಲಿನ ಜನರು ದುರ್ವಾಸನೆಯಿಂದ ತೊಂದರೆಗೆ ಒಳಗಾಗಿದ್ದಾರೆ.

ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಕಲುಷಿತ ನೀರು ರಸ್ತೆಯ ಮಧ್ಯದಲ್ಲಿ ಹರಿದು ದುರ್ವಾಸನೆ ಬೀರುತ್ತಿದೆ. ಕೂಗಳತೆ ದೂರದಲ್ಲಿ ಶಾಲಾ, ಕಾಲೇಜು ಇದ್ದು ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಗುಂಡಿಯಲ್ಲಿ ಕಲುಷಿತ ನೀರು ನಿಂತಿದ್ದು ಸೊಳ್ಳೆಗಳ ಅವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಡೆಂಗಿ, ಚಿಕೂನ್‌ ಗುನ್ಯಾ ಭೀತಿಯೂ ಜನರಲ್ಲಿ ಎದುರಾಗಿದೆ.

ADVERTISEMENT

ಈ ರಸ್ತೆಗಳಲ್ಲಿ ಬೆಳಿಗ್ಗೆ ನೂರಾರು ಜನರು ವಾಯುವಿಹಾರ ಮಾಡುತ್ತಿದ್ದಾರೆ. ಕಲುಷಿತ ನೀರಿನಿಂತ ಇತ್ತೀಚಿನ ದಿನಗಳಲ್ಲಿ ಇಲ್ಲಿ ನಡೆದಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಕೂಡಲೇ ನಗರಸಭೆ ಅಧಿಕಾರಿಗಳು, ಕಲುಷಿತ ನೀರು ಚರಂಡಿಯಲ್ಲಿ ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸಬೇಕು ಮತ್ತು ಭೂಗತ ಒಳಚರಂಡಿ ಸಂಪರ್ಕ ಕಲ್ಪಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.