ADVERTISEMENT

ರಾಮನಗರ ರೈಲು ಪ್ರಯಾಣಿಕರು ಈಗ ಖುಷ್‌...

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 10:20 IST
Last Updated 3 ಮಾರ್ಚ್ 2014, 10:20 IST

ರಾಮನಗರ: ಯಶವಂತಪುರ ಮತ್ತು ಕೇರಳದ ಕಣ್ಣೂರು ನಡುವೆ ನಿತ್ಯ ಸಂಚರಿಸುವ ಯಶವಂತಪುರ–ಕಣ್ಣೂರು ಎಕ್ಸ್‌ಪ್ರೆಸ್‌ ರೈಲು  (16517­­­/­­­165­18) ಮಾರ್ಚ್‌ 7ರಿಂದ ರಾಮನಗರ ಮತ್ತು ಚನ್ನಪಟ್ಟಣ­­ಗಳಲ್ಲಿ ನಿಲ್ಲಿಸಲು ಅನುಮತಿ ನೀಡಿ ರೈಲ್ವೆ ಸಚಿವಾಲಯ ಆದೇಶ ಹೊರಡಿಸಿದೆ.

ಬೆಂಗಳೂರು ಗ್ರಾಮಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್‌ ಅವರ ಒತ್ತಾಯದ ಮೇರೆಗೆ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಈ ತೀರ್ಮಾನ ಪ್ರಕಟಿಸಿದ್ದಾರೆ. ಇದರಿಂದ ಚನ್ನಪಟ್ಟಣ ಮತ್ತು ರಾಮನಗರದಿಂದ ನಿತ್ಯ ಬೆಂಗಳೂರಿಗೆ ಪ್ರಯಾಣಿಸುವ ಸಾವಿರಾರು ರೈಲ್ವೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸೈಯದ್‌ ಜಿಯಾವುಲ್ಲಾ, ಮಾಜಿ ಶಾಸಕ ಸಿ.ಎಂ.­ಲಿಂಗಪ್ಪ, ಮುಖಂಡ ರಘು­ನಂದನ್‌ ರಾಮಣ್ಣ ಕಾಂಗ್ರೆಸ್‌ ಕಚೇರಿ­ಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಕ್ಸ್‌ಪ್ರೆಸ್‌ ರೈಲುಗಳು ರಾಮನಗರ ಮತ್ತು ಚನ್ನಪಟ್ಟಣದಲ್ಲಿ ನಿಲುಗಡೆ ಮಾಡಬೇಕು ಎಂಬುದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಸಂಸದರು ಜನಸಂಪರ್ಕ ಸಭೆಗಳನ್ನು ನಡೆಸಿದ ಸಂದರ್ಭದಲ್ಲಿ ಜನರಿಂದ ಈ ಬಗ್ಗೆ ಹೆಚ್ಚು ಮನವಿಗಳು ಕೇಳಿ ಬಂದಿದ್ದವು. ಈ ಸಲುವಾಗಿ ನಾಗರಿಕರು, ರೈಲ್ವೆ ಪ್ರಯಾಣಿಕರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ರಾಜಕಾರಣಿ­ಗಳು ರೈಲ್ವೆ ತಡೆ ಹೋರಾಟಗಳನ್ನು ಮಾಡಿದರೂ ಪ್ರಯೋಜನವಾಗಿರಲಿಲ್ಲ. ಆದರೆ ಸಂಸದ ಸುರೇಶ್‌ ಅವರು ರೈಲ್ವೆ ಸಚಿವ ಖರ್ಗೆ ಅವರ ಮನವೊಲಿಸಿ ಜಿಲ್ಲೆಯ ಜನರಿಗೆ ಈ ಕೊಡುಗೆ ದೊರೆಕಿಸಿಕೊಟ್ಟಿದ್ದಾರೆ ಎಂದು ಅವರು ಹೇಳಿದರು.

ಇದಲ್ಲದೆ ಇನ್ನೂ ಕೆಲ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಮನವಿ ಮಾಡ­ಲಾಗಿದ್ದು, ಹಂತ ಹಂತವಾಗಿ ಈಡೇ­ರುವ ಸಾಧ್ಯತೆ ಇದೆ. ಚನ್ನಪಟ್ಟಣ­ದ ಎಲೆಕೆರಿ ಬಳಿ ₨15 ಕೋಟಿ ವೆಚ್ಚದಲ್ಲಿ ರೈಲ್ವೆ ಮೇಲು ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ದೊರೆತಿದೆ. ಅದೇ ರೀತಿ ಟಿಪ್ಪು ನಗರ­ದಲ್ಲಿ ರೈಲ್ವೆ ಕೆಳ ಸೇತುವೆ ನಿರ್ಮಿಸುವ (₨2.26 ಕೋಟಿ) ಪ್ರಸ್ತಾವಕ್ಕೆ ಶೀಘ್ರವೇ ಅನುಮೋದನೆ ದೊರೆಯಲಿದೆ.
ರಾಮನಗರದ ಕೆಂಪನಹಳ್ಳಿ ಬಳಿಯ ರೈಲ್ವೆ ಲೆವೆಲ್‌ ಕ್ರಾಸಿಂಗ್‌ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲು ಅನುಮತಿ ಲಭ್ಯವಾಗಿದೆ ಎಂದರು.

ಸಿಎಂ ವಿಶೇಷ ಅನುದಾನ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಎಂಟು ವಿಧಾನ­ಸಭಾ ಕ್ಷೇತ್ರಗಳ ಪೈಕಿ ಆರಕ್ಕೆ (ರಾಮ­ನಗರ, ಚನ್ನಪಟ್ಟಣ, ಕನಕಪುರ, ಮಾಗಡಿ, ಕುಣಿಗಲ್‌, ಆನೆಕಲ್‌) ಮುಖ್ಯ­ಮಂತ್ರಿ ಅವರ ವಿಶೇಷ ಅನುದಾನ­­ದಲ್ಲಿ ₨18 ಕೋಟಿ ಲಭ್ಯ­ವಾಗಿದೆ. ಪ್ರತಿ ಕ್ಷೇತ್ರಕ್ಕೆ ತಲಾ ಮೂರು ಕೋಟಿ ವೆಚ್ಚದಲ್ಲಿ ಸಿಮೆಂಟ್‌ ರಸ್ತೆ ನಿರ್ಮಾಣವಾಗಲಿದೆ.

ಇದಲ್ಲದೆ ಕನಕಪುರ ಮತ್ತು ರಾಮನಗರಕ್ಕೆ ರಾಜೀವ್‌ ಆವಾಸ್‌ ಯೋಜನೆ­ಯಡಿ ವಸತಿ ಯೋಜನೆ ಅನು­ಮೋದನೆ ದೊರೆಯಲಿದೆ. ಕನಕ­ಪುರ­ದಲ್ಲಿ ₨72 ಕೋಟಿ ಹಾಗೂ ರಾಮನಗರ­­ದಲ್ಲಿ ₨ 50 ಕೊಟಿ ವೆಚ್ಚ­ದಲ್ಲಿ ಮನೆಗಳು ನಿರ್ಮಾಣ­ವಾಗ­ಲಿದ್ದು, ಈ ಪಟ್ಟಣಗಳನ್ನು ಕೊಳೆ­ಗೇರಿ ಮುಕ್ತಗೊಳಿಸುವ ಮಹತ್ವದ ಉದ್ದೇಶ­ದಿಂದ ಈ ಯೋಜನೆ ಜಾರಿಗೆ ಬರಲಿದೆ ಎಂದರು.

ಕಾಂಗ್ರೆಸ್‌ ಮುಖಂಡ ಮರಿದೇವರು, ರಮೇಶ್‌, ಕೆ.ಶೇಷಾದ್ರಿ, ಕಾಂತರಾಜ ಪಟೇಲ್‌, ಸಿ.ಎನ್‌.ಆರ್‌. ವೆಂಕಟೇಶ್‌. ಎಲ್‌.ಚಂದ್ರಶೇಖರ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.