ADVERTISEMENT

ವಿದ್ಯುತ್ ಕೊರತೆ; ಬೆಸ್ಕಾಂ ಎದುರು ಧರಣಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 19:30 IST
Last Updated 9 ಸೆಪ್ಟೆಂಬರ್ 2011, 19:30 IST

ಕನಕಪುರ: ಗ್ರಾಮದಲ್ಲಿ ಕಳೆದ ಒಂದೂವರೆ ವರ್ಷಗಳ ಹಿಂದೆ ಟ್ರಾನ್ಸ್‌ಫಾರ್ಮರ್ ಕಳ್ಳತನವಾಗಿದ್ದರೂ ಹೊಸದನ್ನು ಅಳವಡಿಸಿದೆ ನಿರ್ಲಕ್ಷ್ಯತಾಳಿರುವ ಬೆಸ್ಕಾಂ ಅಧಿಕಾರಗಳ ಕ್ರಮವನ್ನು ಖಂಡಿಸಿ  ಕಸಬಾ ಹೋಬಳಿ ತುಂಗಣಿ ಗೇಟ್‌ಬಳಿಯ ಸಂಪಂಗನದೊಡ್ಡಿ ಗ್ರಾಮದ ಮಹಿಳೆಯರು ಪಟ್ಟಣದ ಕುರುಪೇಟೆ ಬೆಸ್ಕಾಂ ಕಚೇರಿ ಎದುರು ಶುಕ್ರವಾರ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ಮಾತನಾಡಿ, ಟ್ರಾನ್ಸ್‌ಫಾರ್ಮರ್ ಅಳವಡಿಸಲು ಇಲಾಖೆಯ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಅದಕ್ಕೆ ಅವರು ಸ್ಪಂದಿಸಿಲ್ಲ. ಇದರಿಂದ ವಿದ್ಯುತ್ ಪೂರೈಕೆ ಅಸಮರ್ಪಕವಾಗಿದೆ. ಕುಡಿಯುವ ನೀರಿಗೆ ತುಂಬಾ ತೊಂದರೆಯಾಗಿದೆ. ಒಂದು ಕಿಲೋ ಮೀಟರ್ ದೂರದ ತೋಟಗಳಿಂದ ನೀರು ತರಬೇಕಿದೆ~ ಎಂದು ತಮ್ಮ ನೋವನ್ನು ತೋಡಿಕೊಂಡರು.

ಗ್ರಾಮದಲ್ಲಿನ ಟ್ರಾನ್ಸ್‌ಫಾರ್ಮರ್ ಕಳುವಾಗಿರುವ ಬಗ್ಗೆ ಪೊಲೀಸ್‌ಠಾಣೆಯಲ್ಲಿ ದೂರು ನೀಡಿದ್ದೀವೆ.
ಆದರೆ ಪೊಲೀಸರು ದೂರು ದಾಖಲಿಸಿಕೊಂಡು ಎಫ್.ಐ.ಆರ್. ಪ್ರತಿ ನೀಡದಿರುವುದರಿಂದ ಹೊಸ ಟ್ರಾನ್ಸ್‌ಫಾರ್ಮರ್ ಅಳವಡಿಸಲು ಆಗುತ್ತಿಲ್ಲವೆಂದು ಎಂಜಿನಿಯರ್ ಪವನ್‌ಕುಮಾರ್ ಸಬೂಬು ನೀಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕುಡಿಯುವ ನೀರಿನ ತೊಂದರೆ ಬಗ್ಗೆ ಗ್ರಾಮ ಪಂಚಾಯಿತಿಯವರ ಗಮನಕ್ಕೆ ತಂದರೂ ಏನು ಪ್ರಯೋಜನವಾಗಿಲ್ಲ, ಅವರು ನಮ್ಮ ಮನವಿಗೆ ಸ್ಪಂದಿಸದೇ ತಮ್ಮ ಅಸಹಾಯಕತೆ ಪ್ರದರ್ಶಿಸುತ್ತಾರೆ ಎಂದು ದೂರಿದರು.

ಬೆಸ್ಕಾಂ ಅಧಿಕಾರಿಗಳು ಹೊಸ ಟ್ರಾನ್ಸ್ ಫಾರ್ಮರ್ ಅಳವಡಿಸಿ ವಿದ್ಯುತ್ ಪೂರೈಸಿ ಕುಡಿಯುವ ನೀರಿನ ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ಬೀದಿಗಳಿದು ಉಗ್ರ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದರು. ಗ್ರಾಮದ ಮುಖಂಡರಾದ   ಜೆ.ಎಂ.ಶಿವಲಿಂಗಯ್ಯ, ವರದರಾಜು, ಶಿವರುದ್ರಯ್ಯ, ರಮೇಶ್, ತಿಮ್ಮಯ್ಯ ಸೇರಿದಂತೆ  ಮಹಿಳೆಯರು ಧರಣಿಯಲ್ಲಿ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.