ADVERTISEMENT

ವೈಚಾರಿಕ ಚಿಂತನೆಯಿಂದ ಸಮಾಜದ ಪ್ರಗತಿ ಸಾಧ್ಯ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 19:30 IST
Last Updated 22 ಜನವರಿ 2011, 19:30 IST

ಚನ್ನಪಟ್ಟಣ:  ಸಮಾಜ ಅಭಿವೃದ್ಧಿಯಾಗಬೇಕಾದಲ್ಲಿ ಮೌಢ್ಯ, ದಾರಿದ್ರ್ಯ, ನಿರುದ್ಯೋಗಗಳನ್ನು ಹೊರ ಹಾಕಬೇಕು. ಇದು ಉತ್ತಮ ಶಿಕ್ಷಣ ಹಾಗೂ ವೈಚಾರಿಕ ಚಿಂತನೆಯಿಂದ ಮಾತ್ರ ಸಾಧ್ಯ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಚೆಲುವಪ್ಪ ತಿಳಿಸಿದರು. ಅಪ್ಪಗೆರೆಯ ಸೆಂಟ್ ಆನ್ಸ್ ಬಾಲಕಿಯರ ಪದವಿ ಪೂರ್ವ  ಕಾಲೇಜಿನ ವಾರ್ಷಿಕೋತ್ಸವ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯ ಸಂಸ್ಕೃತಿ, ನಾಗರೀಕತೆ, ಪ್ರಜ್ಞಾವಂತಿಕೆಯನ್ನು ಮೈಗೂಡಿಸಿಕೊಂಡು ಸಮಾಜದಲ್ಲಿನ ಅವ್ಯವಹಾರಗಳಿಗೆ ಕಡಿವಾಣ ಹಾಕಬೇಕಿದೆ. ಪರಿಪೂರ್ಣ ಜ್ಞಾನದಿಂದ ಮಾತ್ರ ವೈಯಕ್ತಿಕವಾಗಿ ಹಾಗೂ ಸಾಮಾಜಿಕವಾಗಿ ವ್ಯಕ್ತಿ ಉನ್ನತಿ ಗಳಿಸಲು ಸಾಧ್ಯವಿದೆ ಎಂದು ಅವರು ಹೇಳಿದರು. ನಾವು ಗಳಿಸಿದ ಜ್ಞಾನವನ್ನು ಸಮಾಜಕ್ಕೆ ಉನ್ನತ ಚಿಂತನೆ, ದಾರ್ಶನಿಕ ಮನೋಭಾವದಿಂದ ಪುನರಾರ್ಪಣೆ ಮಾಡಬೇಕೆಂದರು. ಕ್ರೈಸ್ತ ಮಿಷನರಿಗಳು ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗೆ ನೀಡಿರುವ ಕೊಡುಗೆ ಅನನ್ಯ, ಹಾಗೂ ಅನುಕರಣೀಯವಾಗಿದೆ ಎಂದರು.

ಸೆಂಟ್ ಆನ್ಸ್ ಸಮೂಹ ವಿದ್ಯಾ ಸಂಸ್ಥೆಗಳ ವ್ಯವಸ್ಥಾಪಕಿ ಸಿ. ಆಂಜಲೀನಾ ಮಾತನಾಡಿ, ಉತ್ತಮವಾಗಿ ವ್ಯಾಸಂಗ ಮಾಡಿ ಜೀವನದಲ್ಲಿ ಶ್ರೇಯಸ್ಸು ಹೊಂದುವ ಗುರಿಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು. ಕಾಲೇಜಿನ ಪ್ರಾಚಾರ್ಯೆ ಸಿ.ಅರುಳ್‌ಶೀಲಿ, ಸೆಂಟ್ ಆನ್ಸ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಸಿ. ಜಸ್ಲಿನ್, ಆಂಗ್ಲ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿ. ಸುಗುಣಮೇರಿ, ಕನ್ನಡ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿ. ಅರುಣ, ಭಗಿನಿಯರಾದ ಆರೋಗ್ಯಮೇರಿ, ಲಿಲ್ಲಿ, ಶೀಲಾ, ಉಪನ್ಯಾಸಕ ಹೆಚ್.ಎಂ. ರಮೇಶ್ ಉಪಸ್ಥಿತರಿದ್ದರು. ಗ್ರೀಷ್ಮಾವರದಿ ನೀಡಿದರು. ವಿ.ಆರ್. ವಂದನ ಸ್ವಾಗತಿಸಿ, ಕೆ.ಪಿ. ಪ್ರಿಯಾಂಕ ವಂದಿಸಿದರು, ಬೃಂದಾ ಹಾಗೂ ತೇಜಸ್ವಿನಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.