ADVERTISEMENT

ಸಂಭ್ರಮದ ಬಿಳಿಕಲ್ ರಂಗನಾಥನ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 19:30 IST
Last Updated 9 ಜನವರಿ 2012, 19:30 IST

ಕನಕಪುರ: ತಾಲ್ಲೂಕಿನ ಪ್ರಸಿದ್ಧ ಶ್ವೇತಾದ್ರಿ ಗಿರಿ ಬಿಳಿಕಲ್ ಬೆಟ್ಟದ  ರಂಗನಾಥಸ್ವಾಮಿ ಬ್ರಹ್ಮರಥೋತ್ಸವ ಮತ್ತು ಜಾತ್ರೆ ಸೋಮವಾರ ವಿಜೃಂಭಣೆಯಿಂದ ನಡೆಯಿತು.

ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ, ಮಾಜಿ ಪುರಸಭಾ ಅಧ್ಯಕ್ಷರಾದ ಬಿ.ನಾಗರಾಜ್, ಸಮಾಜ ಸೇವಕ ಅನಿಲ್‌ಕುಮಾರ್‌ರವರು ಅವರು ರಂಗನಾಥಸ್ವಾಮಿ ರಥೋತ್ಸವ, ಲಕ್ಷ್ಮೀದೇವಿ ಸಮೇತ ಉತ್ಸವಕ್ಕೆ ಚಾಲನೆ ನೀಡಿದರು.

ಉತ್ಸವದಲ್ಲಿ ರಥವು ದೇವಾಲಯದ ಆವರಣದಲ್ಲಿ ಸಂಚರಿಸಿತು. ಬೆಳಿಗ್ಗೆ 10 ಗಂಟೆಯಿಂದಲೇ ದೇವಾಲಯಕ್ಕೆ ಭಕ್ತ ಸಾಗರ ಹರಿದುಬಂತು. ಬಂದವರೆಲ್ಲ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವರ ದರ್ಶನ ಭಾಗ್ಯ ಪಡೆದು ಪುನೀತರಾದರು. ರಥೋತ್ಸವ ಸಮಯದಲ್ಲಿ ಭಕ್ತರು ಹಣ್ಣು ಧವನ ಎಸೆದು ಭಕ್ತಿಭಾವ ಮೆರೆದರು.

ಕನಕಪುರ ಸೇರಿದಂತೆ ಎಂ.ಮಣಿಮಂಬಾಳ್, ದುನ್ನಸಂದ್ರ, ತೋಕಸಂದ್ರ, ಬಾಚಳ್ಳಿದೊಡ್ಡಿ, ಸುಂಡಘಟ್ಟ, ಬೆಟ್ಟೇಗೌಡನದೊಡ್ಡಿ, ಮರಳವಾಡಿ, ಮಳಗಾಳು, ಜವನ್ನಮ್ಮನದೊಡ್ಡಿ, ಗೌಡಹಳ್ಳಿ ಸೇರಿದಂತೆ ಸುತ್ತ-ಮುತ್ತಲ ಗ್ರಾಮಸ್ಥರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಪ್ರಧಾನ ಅರ್ಚಕ ಎಂ.ವಿ.ಕೃಷ್ಣಮೂರ್ತಿ, ಹಾರೋಹಳ್ಳಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗರಾಜ್, ಮುಖಂಡರಾದ ಸಿದ್ದಮರಿಗೌಡ, ಪುಟ್ಟರಾಜು, ಸ್ಟುಡಿಯೋ ಚಂದ್ರು, ಗಣೇಶ್‌ರಾವ್ ಸೇರಿದಂತೆ ಅನೇಕರು ಹಾಜರಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ದೂಳಿನ ಅಭಿಷೇಕ: ಸುಂಡಘಟ್ಟ ಗ್ರಾಮದಿಂದ ದೇವಸ್ಥಾನಕ್ಕೆ 3 ಕಿ.ಮೀ. ದೂರವಿದೆ. ಈ ರಸ್ತೆಗೆ ಡಾಂಬರ್ ಹಾಕಿಸಿಲ್ಲ. ಕಲ್ಲು- ದೂಳಿನಿಂದ ಕೂಡಿದ ರಸ್ತೆಯಲ್ಲಿ ವಾಹನಗಳ ದಟ್ಟಣೆ. ಇದರಿಂದಾಗಿ ಭಕ್ತರಿಗೆ ದೂಳಿನ ಅಭಿಷೇಕವಾಯಿತು.

ಸಂಬಂಧಪಟ್ಟ ಇಲಾಖೆಯವರು ರಸ್ತೆಗೆ ಕನಿಷ್ಠ ನೀರು ಹಾಕಿಸಿದ್ದರೆ ಈ ತೊಂದರೆ ಯಾಗುತ್ತಿರಲಿಲ್ಲ. 2 ವರ್ಷಗಳ ಹಿಂದೆ ಜಾತ್ರೆ ಸಮಯದಲ್ಲಿ ನೀರು ಚಿಮುಕಿಸಿ ದೂಳು ಅಡಗಿಸಲಾಗಿತ್ತು. ಈ ಬಾರಿ ಅಂಥ ಕ್ರಮ ಕೈಗೊಂಡಿಲ್ಲವೆಂದು ಭಕ್ತರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.