ADVERTISEMENT

`ಸಾಧನೆಗೆ ದೊಡ್ಡ ಕನಸುಗಳಿರಲಿ'

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 6:34 IST
Last Updated 3 ಸೆಪ್ಟೆಂಬರ್ 2013, 6:34 IST

ರಾಮನಗರ: `ವಿದ್ಯಾರ್ಥಿ ದಿಸೆಯಲ್ಲಿ ಸಾಧನೆ ಚಿಕ್ಕದಾಗಿದ್ದರೂ ಕಾಣುವ ಕನಸು ದೊಡ್ಡದಾಗಿದ್ದಾಗ ಮಾತ್ರ ಗುರಿಯನ್ನು ಮುಟ್ಟಲು ಸಾದ್ಯವಾಗುತ್ತದೆ' ಎಂದು ಶಿಕ್ಷಣ ತಜ್ಞ ಪ್ರೊ.ಬಿ.ಕೃಷ್ಣಪ್ಪ ತಿಳಿಸಿದರು.

ತಾಲ್ಲೂಕಿನ ಬಿಡದಿಯ ಜ್ಞಾನ ವಿಕಾಸ ಎಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಹಳೆ ವಿದ್ಯಾರ್ಥಿಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಕಲಿಯುವ ಹಂತದಲ್ಲಿ ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಶ್ರಮದಿಂದ ಸಮಯವನ್ನು ಸದ್ಭಳಕೆ ಮಾಡಿಕೊಂಡು ಕಲಿಯಬೇಕು. ಒಮ್ಮೆ ಹೋದ ಸಮಯ ಮತ್ತೆಂದು ಹಿಂದಕ್ಕೆ ಬರುವುದಿಲ್ಲ ಎಂಬುದನ್ನು ವಿದ್ಯಾರ್ಥಿಗಳು ಸದಾ ನೆನಪಿನಲ್ಲಿಟ್ಟುಕೊಂಡು ಸಮಯದ ಸದುಪಯೋಗ ಪಡೆದುಕೊಳ್ಳಬೇಕು. ಸತತ ಪರಿಶ್ರಮದ ಮೂಲಕ ಯಶಸ್ಸು ಗಳಿಸಬೇಕು  ಎಂದು ಅವರು  ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಸಿ.ಎಂ.ಲಿಂಗಪ್ಪ ಮಾತನಾಡಿ, `ಶಿಕ್ಷಣ ಕ್ಷೇತ್ರದಲ್ಲಿ ಇಂದು ಇನ್ನಿಲ್ಲದಂತಹ ಪೈಪೋಟಿ ಮತ್ತು ಸ್ಪರ್ಧೆಗಳು ನಡೆಯುತ್ತಿವೆ. ಇದನ್ನು ಮೆಟ್ಟಿ ನಿಲ್ಲಲು ಹೊಸ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಪ್ರಮುಖ ಉದ್ದೇಶದಿಂದಲೇ ಹಳೆ ವಿದ್ಯಾರ್ಥಿಗಳ ಸಮಾವೇಶವನ್ನು ಹಮ್ಮಿಕೊಳ್ಳಲಾಗುತ್ತಿದೆ.

`ಕೆಲವು ವರ್ಷಗಳ ಹಿಂದೆ ಇದ್ದಂತಹ ಶಿಕ್ಷಣ ಕ್ರಮ ಇಂದು ಪೂರ್ಣ ಪ್ರಮಾಣದಲ್ಲಿ ಬದಲಾವಣೆಯಾಗಿದೆ. ವಿದ್ಯಾರ್ಥಿಗಳು ಬದಲಾದ ಶಿಕ್ಷಣ ಪದ್ಧತಿಗೆ ಹೊಂದಿಕೊಂಡು ತಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದ ಅವಶ್ಯಕತೆ ಇದೆ' ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಎಸ್.ಕೆ.ಶ್ರಿವಾತ್ಸವ, ಕಾರ್ಯದರ್ಶಿ ರಾಮ ಶಿವಣ್ಣ, ಖಜಾಂಚಿ ಬಿ.ಜೆ.ಹೊನ್ನಶೆಟ್ಟಿ, ನಿರ್ದೇಶಕರಾದ ಪಿ.ಕೆ.ರಾಮಮೂರ್ತಿ, ಎಲ್.ಶಿವಪ್ರಸಾದ್, ಬಿ.ಎನ್.ಗಂಗಾಧರ್ ಸೇರಿದಂತೆ ಎಂಜಿನಿಯರಿಂಗ್ ವಿಭಾಗದ ಮುಖಸ್ಥರು ವತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳು ಹಾಗೂ ನೂತನವಾಗಿ ಕಾಲೇಜಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ನಡುವೆ ಶೈಕ್ಷಣಿಕ ಸಂವಾದ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.