ರಾಮನಗರ: ತಲಘಟ್ಟಪುರ ವ್ಯಾಪ್ತಿಯ ವಾಜರಹಳ್ಳಿ ನಿವಾಸಿಯಾದ ಸಾಹಿತಿ ಪುಸ್ತಕಮನೆ ಹರಿಹರಪ್ರಿಯ ಮತ್ತು ಅವರ ಪುತ್ರ `ಇಸ್ರೊ~ ವಿಜ್ಞಾನಿ ಜಗತಿಪ್ರಿಯ ಅವರ ಮೇಲೆ ಭಾನುವಾರಹಲ್ಲೆ ನಡೆಸಲಾಗಿದೆ. ಈ ಕುರಿತು ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
`ಭಾನುವಾರ ಬೆಳಿಗ್ಗೆ ಕೆಲ ದುಷ್ಕರ್ಮಿಗಳು ಏಕಾಏಕಿ ನಮ್ಮ ಮನೆ ಮುಂದೆ ಕಸದ ರಾಶಿಯನ್ನು ತಂದು ಸುರಿದಿದ್ದಾರೆ. ಇದನ್ನು ಪ್ರಶ್ನಿಸಲು ಹೋದ ನನ್ನನ್ನು ಮತ್ತು ನನ್ನ ಮಗನನ್ನು ದುಷ್ಕರ್ಮಿಗಳು ಥಳಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಮೂರು ದಿನವಾದರೂ ಪೊಲೀಸರು ಯಾರ ಮೇಲೂ ಕ್ರಮ ತೆಗೆದುಕೊಂಡಿಲ್ಲ~ ಎಂದು ಅವರು `ಪ್ರಜಾವಾಣಿ~ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.
`ಈ ಹಲ್ಲೆಯ ಹಿಂದೆ ರಿಯಲ್ ಎಸ್ಟೇಟ್ ದಂದೆಕೋರರ ಕೈವಾಡ ಇದೆ. ನಾವು ವಾಸ ಮಾಡುತ್ತಿರುವ ಬಡಾವಣೆಯ ಭೂಮಿ ವಿಷಯದ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದು, ಕೆಲವು ರಿಯಲ್ ಎಸ್ಟೇಟ್ ದಂದೆಕೋರರು ಹಲವು ದಿನಗಳಿಂದ ಬಡಾವಣೆಯ ಖಾಲಿ ನಿವೇಶನಗಳ ಸುತ್ತ ಸಂಚರಿಸುತ್ತಿದ್ದಾರೆ. ಅಲ್ಲದೆ ಬಡಾವಣೆಯಲ್ಲಿ ಇರುವ ಕೆಲವೇ ಕೆಲವು ಮನೆ ಮಾಲೀಕರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಹರಿಹರಪ್ರಿಯ ಆರೋಪಿಸಿದ್ದಾರೆ.
ಬಡಾವಣೆಯಲ್ಲಿ ದುಷ್ಕರ್ಮಿಗಳ ಅಟ್ಟಹಾಸ ವಿಪರೀತವಾಗಿದ್ದು ಇಲ್ಲಿನ ನಿವಾಸಿಗಳಿಗೆ ಪ್ರಾಣಭಯ ಇದೆ. ಪೊಲೀಸರು ಸೂಕ್ತ ರಕ್ಷಣೆ ನೀಡಲು ಮುಂದಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.