ADVERTISEMENT

ಹೇಮಾವತಿ ನೀರು: ಕಾಂಗ್ರೆಸ್‌ ಸಾಧನೆಯಲ್ಲ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 10:09 IST
Last Updated 4 ಮಾರ್ಚ್ 2014, 10:09 IST

ರಾಮನಗರ: ಹೇಮಾವತಿಯಿಂದ ನೀರು ಹರಿಸಿ ಮಾಗಡಿಯ ಕೆರೆಗಳನ್ನು ತುಂಬಿಸುವ ಪ್ರಸ್ತಾವನೆ ಬಹಳ ಹಿಂದಿ­ನಿಂದಲೂ ಇತ್ತು. ಇದನ್ನು ಕಾಂಗ್ರೆಸ್ ಪಕ್ಷ ತನ್ನ ಸಾಧನೆ ಎಂದು ಬೀಗುವ ಅಗತ್ಯವಿಲ್ಲ’ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

ಹೋಬಳಿಯ ಹೆಜ್ಜಾಲದಲ್ಲಿ ಶಾಸಕರ ನಿಧಿಯಿಂದ ರೂ 12 ಲಕ್ಷ ವೆಚ್ಚ­ದಲ್ಲಿ ನಿರ್ಮಿಸಲಿರುವ ಶುದ್ಧ ನೀರಿನ ಘಟಕಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಅವರು ಸುದ್ದಿ­ಗಾರರ ಜತೆ ಮಾತನಾಡಿದರು.

ಹೆೇಮಾವತಿಯಿಂದ ನೀರು ತಂದು ಮಾಗಡಿ ವ್ಯಾಪ್ತಿಯ 89 ಕೆರೆಗಳನ್ನು ತುಂಬಿಸುವ ನಿರ್ಧಾರ ಇಂದು ನಿನ್ನೆ­ಯ­ದಲ್ಲ. 1993-94ರಲ್ಲಿ ಅಂದಿನ ವಿಧಾನ ಪರಿಷತ್ ಸದಸ್ಯ ಟಿ.ಎ.ರಂಗಯ್ಯ ಅವರು ಪ್ರಥಮವಾಗಿ ಶ್ರೀರಂಗ ಯೋಜನೆ ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು ಎಂದು ತಿಳಿಸಿದರು.

ಹಿಂದೆ ವೀರಪ್ಪಮೊಯಿಲಿ ಅವರ ಸರ್ಕಾರದಲ್ಲಿ ನನ್ನನ್ನೂ ಒಳಗೊಂಡಂತೆ ಯೋಜನಾ ಸಮಿತಿ ರಚಿಸಲಾಗಿತ್ತು. ನಂತರದ ದಿನಗಳಲ್ಲಿ ಬಂದ ಎಸ್.ಎಂ.­ಕೃಷ್ಣ ಅವರ ಸರ್ಕಾರದ ಅವಧಿಯಲ್ಲಿ ತಮ್ಮನ್ನು ಸಮಿತಿಯಿಂದ ಕೈ­ಬಿಡ­ಲಾ­ಯಿತು. ನಂತರದ ಬಂದ ಸರ್ಕಾರ­ಗಳಲ್ಲಿ ಯೋಜನೆ ಅನುಷ್ಠಾನಕ್ಕೆ ಮುಂದಾ­­ಗಿ­ರಲಿಲ್ಲ ಎಂದು ಅವರು ವಿವರಿಸಿದರು.

ಹಿಂದಿನ ಬಿಜೆಪಿ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರಿಗೂ ಅನೇಕ ಬಾರಿ ಈ ಬಗ್ಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಸರ್ಕಾರ ಇಚ್ಛಾಶಕ್ತಿ ಕೊರತೆ­ಯಿಂದ ಬೇಡಿಕೆ ನೆರವೇರಲಿಲ್ಲ. ಇದೀಗ ಕಾಂಗ್ರೆಸ್‌ ಅಧಿಕಾರದಲ್ಲಿ ಅನುಷ್ಠಾನ­ವಾಗುತ್ತಿದ್ದು, ಅದಕ್ಕೆ ಸರ್ಕಾರವನ್ನು ಅಭಿನಂದಿಸುವುದಾಗಿ ಶಾಸಕ ಬಾಲಕೃಷ್ಣ ಹೇಳಿದರು.

ಮೂರು ವರ್ಷದವರೆಗೆ ಮಾತಾಡಲ್ಲ: ಈ ಯೋಜನೆ ಅನುಷ್ಠಾನ ಕುರಿತು ಸದ್ಯಕ್ಕೆ ಮಾತನಾಡುವುದಿಲ್ಲ. ಮೂರು ವರ್ಷ ಕಾಮಗಾರಿ ಹೇಗೆ ನಡೆಯುತ್ತದೆ ಎಂಬುದನ್ನು ಗಮನಿಸಿ, ಆ ನಂತರ ಮಾತನಾಡುತ್ತೇನೆ ಎಂದು ಅವರು ಪ್ರತಿಕ್ರಿಯಿಸಿದರು.

ಮಾಜಿ ಶಾಸಕ ಕೆ.ರಾಜು, ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಬ್ಯಾಟಪ್ಪ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಯು.­ನರಸಿಂಹಯ್ಯ, ಗ್ರಾ.ಪಂ ಉಪಾಧ್ಯಕ್ಷ ಕೆಂಪಣ್ಣ, ಮುಖಂಡರಾದ ಶೇಷಪ್ಪ, ಬಿ.ಉಮೇಶ್, ರಾಜಶೇಖರ್, ರಮೇಶ್  ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.