ರಾಮನಗರ: ಇಂದು ಸಮಾಜದಲ್ಲಿ ಬಹಳ ಬದಲಾವಣೆಗಳಾಗಿದ್ದರೂ ಹೆಣ್ಣು ಮಗು ಜನಿಸಿದರೆ ಶಾಪ ಎನ್ನುವ ಭಾವನೆ ಹೋಗಿಲ್ಲ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷೆ ಬಿ. ಅನುಸೂಯಮ್ಮ ವಿಷಾದಿಸಿದರು.
ತಾಲ್ಲೂಕಿನ ಬಿಡದಿ ಹೋಬಳಿಯ ಗೌರಿಪುರ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಕುವೆಂಪು ಮಹಿಳಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ ಸೋಮವಾರ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾವಂತ ಸಮುದಾಯದಲ್ಲಿಯೂ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಹೆಚ್ಚುತ್ತಿವೆ. ಇದಕ್ಕೆ ವರದಕ್ಷಿಣೆ ಪಿಡುಗು ಮತ್ತು ವಂಶೋದ್ಧಾರಕ ಬೇಕು ಎಂಬ ಮೂಢನಂಬಿಕೆಯೇ ಕಾರಣವಾದೆ ಎಂದರು.
ಭಾರತ ಸೇವಾದಲದ ರಾಜ್ಯ ಕಾರ್ಯದರ್ಶಿ ಕಲ್ಪನಾ ಶಿವಣ್ಣ ಮಾತನಾಡಿ, ಮಹಿಳಾ ಪರ ಕಾನೂನು ಬಲಗೊಂಡಿದ್ದರೂ ಅವರ ಮೇಲಿನ ದೌರ್ಜನ್ಯ ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ’ ಎಂದರು.
‘ಮಹಿಳೆಯರು ಧೈರ್ಯದಿಂದ ತಮ್ಮ ಎಲ್ಲಾ ಸಮಸ್ಯೆಗಳನ್ನು ಎದುರಿಸಬೇಕು. ಕಾನೂನಿನ ಬಗ್ಗೆ ಹೆಚ್ಚು ಹೆಚ್ಚಾಗಿ ಅರಿವು ಮೂಡಿಸಿಕೊಳ್ಳುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಗೌರಿಪುರ ಹಕ್ಕಿಪಿಕ್ಕಿ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ಮುಖ್ಯಶಿಕ್ಷಕಿ ಆರ್.ಬಿ. ಗೌಡ, ಶಿಕ್ಷಕರಾದ ಮೀರಾ ಅನುರಾಧ, ನಂಜುಂಡಸ್ವಾಮಿ, ಮಂಜುಳಾ ಪ್ರಕಾಶ್, ತಾಲ್ಲೂಕು ಮಕ್ಕಳ ರಕ್ಷಣಾಧಿಕಾರಿ ತಾಜುದ್ದೀನ್ ಖಾನ್, ಕುವೆಂಪು ಮಹಿಳಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ನ ಗೌರವಾಧ್ಯಕ್ಷೆ ಎಸ್. ಸುಮಂಗಳಾ, ಅಧ್ಯಕ್ಷೆ ಇಂದುಮತಿ ಆನಂದ್, ಲಕ್ಷ್ಮಿ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.