ADVERTISEMENT

‘ಸಾಹಿತ್ಯ ಸಮಾಜದ ಓರೆಕೋರೆ ತಿದ್ದಲಿ’

ಯುವ ಸಾಹಿತಿಗಳಿಗೆ ಸಂಗೀತ ವಿದ್ವಾನ್ ಶಿವಾಜಿರಾವ್ ಸಲಹೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 10:29 IST
Last Updated 3 ಮಾರ್ಚ್ 2014, 10:29 IST

ರಾಮನಗರ: ‘ಸಮಾಜದಲ್ಲಿನ ಅವ್ಯ­ವಸ್ಥೆ­­­ಗಳನ್ನು ಎತ್ತಿಹಿಡಿದು ಅವುಗಳಿಗೆ ಪರಿಹಾರ ಮಾರ್ಗ ಸೂಚಿಸುವ ಸಾಹಿತ್ಯ ರಚನೆಗೆ ಯುವ ಸಾಹಿತಿಗಳು ಮುಂದಾ­ಗ­­­ಬೇಕು’ ಎಂದು ಸಂಗೀತ ವಿದ್ವಾನ್ ಶಿವಾಜಿರಾವ್ ತಿಳಿಸಿದರು.

ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಜಂಟಿಯಾಗಿ ನಗರದ ರಾಮದುರ್ಗ ಪ್ರೌಢಶಾಲೆ­ಯಲ್ಲಿ ಏರ್ಪಡಿಸಿದ ಶಿವರಾತ್ರಿ ಕವಿ­ಗೋಷ್ಠಿ ಮತ್ತು ಗೀತಗಾಯನ ಕಾರ್ಯ­ಕ್ರಮದ ಅಧ್ಯಕ್ಷತೆ ಅವರು ಮಾತನಾಡಿದರು.

‘ಒಂದು ವಸ್ತು ಅಥವಾ ಪ್ರಕೃತಿಯ ವರ್ಣನೆ ಮಾಡುವ ಕಾವ್ಯ, ಸಾಹಿತ್ಯದ ಜೊತಗೆ ಸಮಾಜದ ಸಮಸ್ಯೆಗಳನ್ನು ಬೆಳಕಿಗೆ ತರುವಲ್ಲಿ ಪ್ರಯತ್ನಿಸಬೇಕು ಎಂದರು. ಸಾಹಿತ್ಯ ಪರಿಷತ್ತು ಇಂತಹ ಕಾರ್ಯಕ್ರಮಗಳನ್ನು ಶಾಲಾ ಕಾಲೇಜು­ಗಳಲ್ಲಿಯೂ ಹಮ್ಮಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ. ನಾಗೇಶ್ ಮಾತನಾಡಿ, ‘ಶಾಲೆಗಳಲ್ಲಿ ಜಾನಪದ ಸಾಹಿತ್ಯವನ್ನು ಪರಿಚಯಿ­ಸ­ಬೇಕು. ಮಕ್ಕಳಲ್ಲಿ ಸಂಗೀತಾ­ಭಿರುಚಿ­ಯನ್ನು ಬೆಳೆಸಬೇಕು ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪೋಷಕರ ನಡುವೆ ಪರಸ್ಪರ ಸಹಕಾರ ಮುಖ್ಯ’ ಎಂದರು.

‘ಪ್ರಾಥಮಿಕ ಮತ್ತು ಪ್ರೌಢಶಾಲೆ­ಗಳಲ್ಲಿ ಸಾಹಿತ್ಯ ಪರಿಷತ್ತು ಕಾರ್ಯ­ಕ್ರಮ­­ಗಳನ್ನು ಹೆಚ್ಚಾಗಿ ಏರ್ಪಡಿಸುವ ಮೂಲಕ ನಾಡಿನ ಜಾನಪದ ಸಮಗ್ರ ಸಾಹಿತ್ಯ ಜ್ಞಾನದ ಬಗ್ಗೆ ಅರಿವು ಮೂಡಿಸುತ್ತಿದೆ’ ಎಂದು ಅವರು ಹೇಳಿದರು.

ಶಾಲೆಯ ಮುಖ್ಯ ಶಿಕ್ಷಕ ಕೃಷ್ಣಪ್ಪ, ನಗರಸಭೆ ಮಾಜಿ ಸದಸ್ಯರಾದ ದೊಡ್ಡಿ ಸೂರಿ,  ಚಂದ್ರು ಮಾತನಾಡಿದರು.
ನಗರ ಸಭೆ ಸದಸ್ಯ ಡಿ.ಕೆ.­ಶಿವ­ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ­ದರು. ರಾಮನಗರ ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಟಿ.ದಿನೇಶ್, ಕಾರ್ಯದರ್ಶಿ ಜಿ.ಟಿ.ಕೃಷ್ಣಪ್ಪ, ಖಜಾಂಚಿ ರಾಜೇಶ್, ಸಮಿತಿ ಸದಸ್ಯ ಡೈರಿ ವೆಂಕಟೇಶ್, ಗಿರೀಶ್, ಅನಂತ್, ಶಾಲೆ ಶಿಕ್ಷಕರು ಹಾಗೂ ಸಿಬ್ಬಂದಿ ಹಾಜರಿದ್ದರು. 
 
ಕಾರ್ಯ­ಕ್ರಮದಲ್ಲಿ ಜಿಲ್ಲಾ ಸಾಂಸ್ಕೃತಿಕ ಘಟಕದ ಸಂಚಾಲಕ ಚೌ.ಪು.ಸ್ವಾಮಿ, ವಿನಯ್ ಕುಮಾರ್ ಗೀತಗಾಯನ ಕಾರ್ಯಕ್ರಮ ನಡೆಸಿ­ಕೊಟ್ಟರು. ಕವಿ­ಗಳಾದ ಶೈಲಜಾ ಶ್ರೀನಿವಾಸ್, ಕೆ.ಶಿವ­ಹೊಂಬಯ್ಯ, ನಂ. ಶಿವಲಿಂಗಯ್ಯ, ಮಂಜುಳಾ ಪ್ರಕಾಶ್, ಚನ್ನಮಾನಹಳ್ಳಿ ಮಲ್ಲೇಶ್ ಮುಂತಾದವರು ಗೀತ­ಗಾಯನ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.