ADVERTISEMENT

13 ಅಭ್ಯರ್ಥಿಗಳ ಠೇವಣಿ ಖೋತಾ!

​ಪ್ರಜಾವಾಣಿ ವಾರ್ತೆ
Published 23 ಮೇ 2019, 14:16 IST
Last Updated 23 ಮೇ 2019, 14:16 IST
ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಮತ ಎಣಿಕೆ ಕೇಂದ್ರದಲ್ಲಿ ಎಣಿಕೆ ಕಾರ್ಯದಲ್ಲಿ ನಿರತರಾದ ಸಿಬ್ಬಂದಿ
ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಮತ ಎಣಿಕೆ ಕೇಂದ್ರದಲ್ಲಿ ಎಣಿಕೆ ಕಾರ್ಯದಲ್ಲಿ ನಿರತರಾದ ಸಿಬ್ಬಂದಿ   

ರಾಮನಗರ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಒಟ್ಟು 15 ಅಭ್ಯರ್ಥಿಗಳು ಕಣದಲ್ಲಿ ಇದ್ದು, ಅವರಲ್ಲಿ 13 ಮಂದಿ ತಮ್ಮ ಠೇವಣಿ ಕಳೆದುಕೊಂಡಿದ್ದಾರೆ.

ಡಿ.ಕೆ. ಸುರೇಶ್‌ ಬರೋಬ್ಬರಿ 2.06 ಲಕ್ಷ ಮತಗಳ ಅಂತರದಿಂದ ಗೆದ್ದು ಬೀಗಿದರೆ, ಸಮೀಪದ ಪ್ರತಿ ಸ್ಪರ್ಧಿ ಬಿಜೆಪಿಯ ಅಶ್ವಥ್‌ ನಾರಾಯಣ್ ಸಹ ಉತ್ತಮ ಸಂಖ್ಯೆಯ ಮತಗಳನ್ನೇ ಗಳಿಸಿದ್ದಾರೆ. ಆದರೆ ಉಳಿದವರ ಸಾಧನೆ ಹೇಳಿಕೊಳ್ಳುವಂತೆ ಇಲ್ಲ.

ಬಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಚಿನ್ನಪ್ಪ ಮಾತ್ರ 20 ಸಾವಿರ ಮತಗಳ ಗಡಿ ಸಮೀಪ ಬಂದಿದ್ದಾರೆ. ದಲಿತ ಮತ್ತು ಹಿಂದುಳಿದ ಸಮುದಾಯದ ಮತಗಳನ್ನು ಅಲ್ಪ ಪ್ರಮಾಣದಲ್ಲಿ ಸೆಳೆಯಲು ಅವರು ಯಶಸ್ವಿ ಆಗಿದ್ದಾರೆ. ಆದರೆ ಉಳಿದ ಪಕ್ಷಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳ ಮತ ಗಳಿಕೆಯು ತೀರಾ ನಿರಾಸದಾಯಕವಾಗಿದೆ.

ADVERTISEMENT

ಉಪೇಂದ್ರ ನೇತೃತ್ವದ ಉತ್ತಮ ಪ್ರಜಾಕೀಯ ಪಕ್ಷದಿಂದ ಕಣಕ್ಕೆ ಇಳಿದಿದ್ದ ಕಾರಣಕ್ಕೆ ಎಂ. ಮಂಜುನಾಥ್ ಮೇಲೆ ನಿರೀಕ್ಷೆ ಇತ್ತು. ಆದರೆ ಅವರೂ ಹತ್ತು ಸಾವಿರ ಗಡಿಯೊಳಗೇ ಇದ್ದಾರೆ. ಎಡಪಂಥೀಯ ವಿಚಾರಧಾರೆಯುಳ್ಳ ಸೋಷಿಯಲಿಸ್ಟ್‌ ಯನಿಟಿ ಸೆಂಟರ್‌ ಆಫ್‌ ಇಂಡಿಯಾದ ಟಿ.ಸಿ. ರಮಾ ಕ್ಷೇತ್ರದ ಏಕೈಕ ಮಹಿಳಾ ಅಭ್ಯರ್ಥಿಯಾಗಿದ್ದು, ವ್ಯಾಪಕ ಪ್ರಚಾರವನ್ನೂ ನಡೆಸಿದ್ದರು. ಆದರೆ ಅವರೂ ಮತದಾರರನ್ನು ಸೆಳೆಯಲು ವಿಫಲರಾಗಿದ್ದಾರೆ. ಪಕ್ಷೇತರರಾದ ಪ್ರಕಾಶ್‌ ಅಲ್ಪ ಮತದಾರರ ಗಮನ ಸೆಳೆದಿದ್ದಾರೆ. ಉಳಿದೆಲ್ಲ ಅಭ್ಯರ್ಥಿಗಳ ಮತ ಎಣಿಕೆ ಸಾಮರ್ಥ್ಯವು 2–3 ಸಾವಿರ ಒಳಗೆ ಸೀಮಿತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.