ADVERTISEMENT

ಕಾಡಾನೆ ದಾಳಿಯಿಂದ ನಷ್ಟ

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 5:58 IST
Last Updated 2 ಜನವರಿ 2018, 5:58 IST

ಕನಕಪುರ: ತಾಲ್ಲೂಕಿನ ಬೆಟ್ಟೇಗೌಡನದೊಡ್ಡಿ ಗ್ರಾಮದಲ್ಲಿ ಕಾಡಾನೆಗಳು ದಾಳಿಮಾಡಿ ರಾಗಿ, ತೊಗರಿ, ಮಾವು, ಕೃಷಿ ಪಂಪ್‌ಸೆಟ್‌ ಪೈಪುಗಳನ್ನು ನಾಶಮಾಡಿದ್ದು ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಬೆಟ್ಟೇಗೌಡನದೊಡ್ಡಿ ಗ್ರಾಮದ ರೈತರಾದ ಮಂಜುನಾಥ್‌ ಅವರ ರಾಗಿಮೆದೆ ಮತ್ತು ತೊಗರಿ, ಪುಟ್ಟಸ್ವಾಮಿಯವರ ತೊಗರಿ, ಕೃಷ್ಣಬೋವಿ ರಾಗಿ, ಕೆಂಪೇಗೌಡರ ರಾಗಿ ಮತ್ತು ತೊಗರಿ, ಕುಮಾರ್‌ ಅವರ ತೊಗರಿ, ಮರಿಯಪ್ಪರ ತೊಗರಿ, ಕರಿಯಪ್ಪರ ತೊಗರಿ, ರಾಜು ಅವರ ಮಾವು ಮತ್ತು ತೊಗರಿ ನಾಶವಾಗಿದೆ.

ಭಾನುವಾರ ರಾತ್ರಿ ಸಂಗಮ ವೈಲ್ಡ್‌ ಲೈಫ್‌ನ ಕೋಡಿಹಳ್ಳಿ ವಲಯ ವ್ಯಾಪ್ತಿಯಿಂದ ಆರೇಳು ಆನೆಗಳ ಹಿಂಡು ದಾಳಿ ನಡೆಸಿ ಸುಮಾರು ₹6 ಲಕ್ಷದಷ್ಟು ಫಸಲು
ನಾಶವಾಗಿರುವುದಾಗಿ ರೈತ ಮಂಜು ನಾಥ್‌ ತಿಳಿಸಿದ್ದಾರೆ.

ADVERTISEMENT

ರಾಗಿ, ತೊಗರಿ ಫಸಲು ಹೋದರೆ ಮುಂದಿನ ವರ್ಷ ಬೆಳೆಯಬಹುದು ಆದರೆ ಮಾವಿನ ಗಿಡಗಳನ್ನೇ ಮುರಿಯುತ್ತಿದ್ದು ಮತ್ತೇ ಗಿಡವನ್ನು ಬೆಳೆಸಲು ಆಗುವುದಿಲ್ಲ, ಕೃಷಿ ಪಂಪ್‌ಸೆಟ್‌ಗಳ ಪೈಪುಗಳನ್ನು ಮುರಿದು ನಾಶ ಮಾಡುತ್ತಿವೆ. ಇದರಿಂದ ರೈತರ ಕೃಷಿಗೆ ತುಂಬಾ ತೊಂದರೆ ಆಗುತ್ತಿದೆ ಎಂದು ನೋವಿನಿಂದ ರೈತ ರಾಜು ಹೇಳುತ್ತಾರೆ.

ರಾತ್ರಿ ವೇಳೆಯಲ್ಲಿ ಕಾವಲು ಕಾದು ಕಷ್ಟಪಟ್ಟು ಬೆಳೆ ಬೆಳೆದಿದ್ದೇವೆ, ಆದರೆ ಅದನ್ನು ಒಕ್ಕಣೆ ಮಾಡಿ ಮನೆಗೆ ತೆಗೆದುಕೊಂಡು ಹೋಗುವುದಕ್ಕೂ ಕಾಡಾನೆಗಳು ಬಿಡುತ್ತಿಲ್ಲ, ಆನೆಗಳು ಬರದಂತೆ ತಡೆಗಟ್ಟುವಂತೆ ಅರಣ್ಯ ಇಲಾಖೆಗೆ ತಿಳಿಸಿದರೂ ಏನು ಪ್ರಯೋಜನವಿಲ್ಲ, ಬಂದಿರುವ ಆನೆಗಳನ್ನು ಓಡಿಸುವಂತೆ ಆರ್‌.ಎಫ್‌.ಓ. ರವಿಕುಮಾರ್‌ಗೆ ಕೇಳಿದರೆ ಅವರುಎಲ್ಲಿ ಆನೆ ಇವೆ ಎಂದು ನೋಡಿಕೊಂಡು ಹೇಳಿ ಆಮೇಲೆ ಬರುವುದಾಗಿ ತಿಳಿಸುತ್ತಾರೆ.

ರೈತರ ಸಮಸ್ಯೆಗೆ ರವಿಕುಮಾರ್ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿದ್ದಾರೆ. ನಿರಂತರ ದಾಳಿಯಿಂದ ತತ್ತರಿಸಿರುವ ರೈತರಿಗೆ ನ್ಯಾಯ ಸಿಗುವಂತೆ ಮತ್ತೆ ಕಾಡಾನೆಗಳನ್ನು ಓಡಿಸಿ ಮುಂದೆ ಬಾರದಂತೆ ಕ್ರಮ ಕೈಗೊಳ್ಳಬೇಕು ಎಂದು ಬೆಟ್ಟೆಗೌಡನದೊಡ್ಡಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.