ಮಾಡಬಾಳ್(ಮಾಗಡಿ): ಸಾವನದುರ್ಗ ಅರಣ್ಯದ ಅಂಚಿನ ಗುಡ್ಡಹಳ್ಳಿಯಲ್ಲಿ ಬುಧವಾರ ತಡರಾತ್ರಿ ಕಾಡಾನೆಗಳ ದಾಳಿಯಿಂದ ಅಪಾರ ಬೆಳೆ ನಷ್ಟವಾಗಿದೆ.
ಮೂರು ಪುಂಡಾನೆಗಳು ರೈತ ಕುಂಬಳಕಾಯಿ ಗಂಗಣ್ಣ ಅವರ ಬೆಳೆನಾಶ ನಾಶಮಾಡಿ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡಿವೆ. ರೈತರಾದ ನರಸಿಂಹಯ್ಯ ಅವರ ತೆಂಗಿನ ಮರ, ಜಯಮ್ಮ ಗಂಗಣ್ಣ ಅವರ ತೆನೆ ಭರಿತ ರಾಗಿಮೆದೆ, ಯಶೋಧಮ್ಮ ಚಲುವಯ್ಯ ಅವರ ಹಲಸಿನ ಮರಗಳು, ಬೆಟ್ಟಯ್ಯ, ರಂಗಪ್ಪ ಅವರ ತೊಗರಿ ಗಿಡ, ಮಾವಿನ ಮರಗಳನ್ನು ತಿಂದು ನಾಶ ಮಾಡಿವೆ.
ಮನವಿ: ಸಾವನದುರ್ಗದ ಅರಣ್ಯದ ಅಂಚಿನಲ್ಲಿ ಇರುವ ಗುಡ್ಡಹಳ್ಳಿ ಗ್ರಾಮದ ರೈತರ ಹೊಲಗದ್ದೆ, ತೋಟಗಳಿಗೆ ನಿತ್ಯ ದಾಳಿ ಮಾಡುವ ವನ್ಯ ಮೃಗಗಳ ದಾಳಿಯಿಂದ ರೈತರನ್ನು ರಕ್ಷಿಸುವಂತೆ ಪ್ರಗತಿಪರ ರೈತ ಕುಂಬಳಕಾಯಿ ಗಂಗಣ್ಣ ಮನವಿ ಮಾಡಿದ್ದಾರೆ.
ಸಾವನದುರ್ಗದ ಅರಣ್ಯದಂಚಿನ ಗ್ರಾಮಗಳಾದ ಗುಡ್ಡಹಳ್ಳಿ, ಪೋಲೋಹಳ್ಳಿ, ಕರಲಮಂಗಲ, ಜೋಡುಗಟ್ಟೆ, ನಾಯಕನಪಾಳ್ಯ, ವೀರೇಗೌಡನ ದೊಡ್ಡಿ, ದಬ್ಬಗುಳಿ, ಮಂಚನಬೆಲೆ, ಮರಲಗೊಂಡಲ, ದೊಡ್ಡಮಸ್ಕಲ್, ಚಿಕ್ಕತೊರೆಪಾಳ್ಯ, ಬಾಚೇನ ಹಟ್ಟಿ, ಅಡಕಮಾರನ ಹಳ್ಳಿ, ಭಂಟರ ಕುಪ್ಪೆ, ತಗಚಕುಪ್ಪೆ, ಕಲ್ಲೂರು, ಮಂಚನಬೆಲೆ ಇತರೆ ಗ್ರಾಮಗಳ ರೈತರ ಪಾಲಿಗೆ ಕಾಡಿನಿಂದ ಬರುವ ಕಾಡಾನೆ, ಚಿರತೆ, ಕರಡಿ, ನರಿ, ಸೀಳು ನಾಯಿ, ನವಿಲು, ಕಾಡುಹಂದಿಗಳ ಕಾಟದಿಂದ ತತ್ತರಿಸಿರುವ ರೈತರು ವಿಎಸ್ಎಸ್ಎನ್ಗಳಲ್ಲಿ ಮಾಡಿರುವ ಸಾಲ
ಕಟ್ಟಲಾರದೆ ಆತ್ಮಹತ್ಯೆ ಮಾಡಿಕೊಳ್ಳಬೇಕಿದೆ ಎಂದು ರೈತ ಗಂಗಯ್ಯ ಅಳಲು ತೋಡಿಕೊಂಡರು.
ಹನಮಯ್ಯ, ಬೆಟ್ಟಯ್ಯ, ರಂಗಪ್ಪ, ನರಸಿಂಹಯ್ಯ, ಚಲುವಯ್ಯ, ಜಯಮ್ಮ , ದೀಪ ವನ್ಯಮೃಗಳಿಂದ ಆಗಿರುವ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.