ADVERTISEMENT

ಸಾವನದುರ್ಗ: ಸಂಭ್ರಮದ ಬ್ರಹ್ಮರಥೋತ್ಸವ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 6:54 IST
Last Updated 1 ಫೆಬ್ರುವರಿ 2018, 6:54 IST

ಮಾಡಬಾಳ್‌ (ಮಾಗಡಿ): ಸಾವನದುರ್ಗದಲ್ಲಿನ ಸಾವಂದಿ ವೀರಭದ್ರ ಸ್ವಾಮಿ ಹಾಗೂ ಭದ್ರಕಾಳಮ್ಮ ದೇವಿ ಜಾತ್ರೆ ಅಂಗವಾಗಿ ಬುಧವಾರ ಬ್ರಹ್ಮರಥೋತ್ಸವ ವೈಭವದಿಂದ ನಡೆಯಿತು.

ಮುಜರಾಯಿ ಇಲಾಖೆಗೆ ಸೇರಿರುವ ಸಾವಿರಾರು ವರ್ಷದ ಸ್ಮಾರಕದಲ್ಲಿನ ವೀರಭದ್ರಸ್ವಾಮಿಗೆ ತಹಶೀಲ್ದಾರ್‌ ಎನ್‌.ಶಿವಕುಮಾರ್‌ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಮ್ಮ ನಂಜಯ್ಯ ಹಾಗೂ ಎ.ಮಂಜುನಾಥ ಭಕ್ತಿಯಿಂದ ಪೂಜೆ ಸಲ್ಲಿಸಿದರು.

ಅಲಂಕೃತ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದ ನಂತರ, ದೇಗುಲದ ಪೌಳಿಯ ಸುತ್ತಲಿನ ಅರವಟಿಗೆಗಳಿಗೆ ಮಂಗಳವಾದ್ಯ, ವಿವಿಧ ಜನಪದ ಕಲಾ ತಂಡಗಳೊಂದಿಗೆ ಕೊಂಡೊಯ್ದು ಪೂಜೆ ಸ್ವೀಕರಿಸಲಾಯಿತು. ನಂತರ ವೀರಗಾಸೆ ನೃತ್ಯಗಳೊಂದಿಗೆ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಕರೆದು ತಂದು ಅಲಂಕೃತವಾಗಿದ್ದ ಹೂವಿನ ರಥದಲ್ಲಿ ಇಡಲಾಯಿತು. ಪೂಜಿಸಿದ ಬಳಿಕ ತಹಶೀಲ್ದಾರರು ರಥೋತ್ಸವಕ್ಕೆ ಚಾಲನೆ ನೀಡಿದರು.

ADVERTISEMENT

ಸಾವಂದಿ ವೀರಭದ್ರ ಸ್ವಾಮಿ ಕೈಂಕರ್ಯ ಸಮಿತಿ ಮೈಸೂರಿನ ಮಲ್ಲಿಕಾರ್ಜುನಯ್ಯ, ಜಡೆ ಒಡೆಯರ ಮಠದ ಇಮ್ಮಡಿ ಬಸವರಾಜ ಸ್ವಾಮಿ, ಕೊಳದ ಮಠದ ಶಾಂತವೀರ ಸ್ವಾಮಿ, ಗುತ್ತಿಗೆದಾರ ನಂಜಪ್ಪ, ಆಡನಕುಪ್ಪೆ ಮಹೇಶ್‌ ತಂಡದವವರು ಪೂಜೆ ಸಲ್ಲಿಸಿ ಭಕ್ತರ ನೆರವಿನೊಂದಿಗೆ ರಥಬೀದಿಯಲ್ಲಿ ರಥ ಎಳೆದು ಭಕ್ತಿ ಸಮರ್ಪಿಸಿದರು.

ಬ್ರಹ್ಮರಥೋತ್ಸವದಲ್ಲಿ ವೀರಗಾಸೆ ನೃತ್ಯ, ಗಾರುಡಿ ಬೊಂಬೆಗಳ ತಂಡದವರು ಮತ್ತು ವಿವಿಧ ಜನಪದ ಕಲಾ ತಂಡದವರು  ಮೆರುಗು ತಂದರು. ಹಂಚಿಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ರಂಗನಾಥ್‌, ತಾಲ್ಲೂಕು ಪಂಚಾಯಿತಿ ಸದಸ್ಯ ಶಂಕರ್‌ ಹಾಗೂ ಸಾವಂದಿ ವೀರಭದ್ರ ಸ್ವಾಮಿ ಕೈಂಕರ್ಯ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಭಕ್ತರು ಭಾಗವಹಿಸಿದ್ದರು.

ಅರ್ಚಕ ರುದ್ರೇಶ್‌ ತಂಡದವರು ರಥೋತ್ಸವದ ಪೂಜೆಗಳನ್ನು ನೆರವೇರಿಸಲಿದರು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಕೈಂಕರ್ಯ ಸಮಿತಿ ವತಿಯಿಂದ ದಾಸೋಹ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.