ಮಾಗಡಿ: ಇಂದಿನ ಮಕ್ಕಳು ಪ್ರತಿಭಾವಂತರಾಗಿರುವಷ್ಟೇ ಭಾವನಾತ್ಮಕವಾಗಿಯೂ ತುಂಬಾ ಸೂಕ್ಷ್ಮರಾಗಿದ್ದು, ಸೂಕ್ತ ಮಾರ್ಗದರ್ಶನ ನೀಡಿದರೆ ಬಹುದೊಡ್ಡ ಜವಾಬ್ದಾರಿ ಹೊರಲು ಸಿದ್ದರಾಗುತ್ತಾರೆ ಎಂದು ಪುರಸಭೆ ಅಧ್ಯಕ್ಷ ಎಚ್.ಆರ್.ಮಂಜುನಾಥ ತಿಳಿಸಿದರು. ಭಾನುವಾರ ರಾತ್ರಿ ಇಲ್ಲಿ ನಡೆದ ಹೊಸಪೇಟೆಯ ಮಾರುತಿ ಪಬ್ಲಿಕ್ ಶಾಲೆಯ 16ನೇ ವಾರ್ಷಿಕೋತ್ಸವದಲ್ಲಿ ಪ್ರತಿಭಾವಂತ ಪುರಸ್ಕಾರ ನೀಡಿ ಅವರು ಮಾತನಾಡಿದರು.
ಮಕ್ಕಳಿಗೆ ಬೇಕಾದ ಮಾರ್ಗದರ್ಶನ, ಆಸರೆ–ಬೆಂಬಲಗಳನ್ನು ಶಾಲೆಯ ಶಿಕ್ಷಕರು ಮತ್ತು ಪೋಷಕರು ಕೊಡುವುದನ್ನು ರೂಢಿಸಿಕೊಳ್ಳಬೇಕು. ಮಕ್ಕಳಲ್ಲಿ ಯಾರೂ ದಡ್ಡರಿಲ್ಲ ಸೂಕ್ತ ವಾತಾವರಣ ನಿರ್ಮಿಸಿಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಪುರಸಭೆ ಅಧ್ಯಕ್ಷರು ತಿಳಿಸಿದರು.
ಮಾರುತಿ ಪಬ್ಲಿಕ್ ಶಾಲೆಯಲ್ಲಿ ಮಕ್ಕಳಿಗೆ ಶೈಕ್ಷಣಿಕ ಅಗತ್ಯ ಪೂರೈಕೆಯಾಗುವುದರ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ಮಾರುತಿ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಎಚ್. ಎಚ್. ಗಂಗರಾಜು ತಿಳಿಸಿದರು. ದೇಶದ ಮಾನವ ಸಂಪನ್ಮೂಲವನ್ನು ಅಭಿವೃದ್ದಿಪಡಿಸುವುದು ಶಾಲೆಗಳ ಆದ್ಯಕರ್ತವ್ಯವಾಗಿದೆ ಎಂದು ಹಿರಿಯ ವಕೀಲ ಆರ್.ನಾಗೇಶ್ ತಿಳಿಸಿದರು.
ಪುರಸಭೆ ಸದಸ್ಯೆ ಸುನಿತ ನಾಗರಾಜು, ಮುಖಂಡರಾದ ವಿಜಯಕುಮಾರ್, ಪುರುಷೋತ್ತಮ್, ರಾಜಶೇಖರ್, ಸಂಸ್ಥೆಯ ಆಡಳಿತಾಧಿಕಾರಿ ವರಲಕ್ಷ್ಮೀ, ಕೆ.ಟಿ. ಮುಖ್ಯಶಿಕ್ಷಕ ನರಸಿಂಹಯ್ಯ ಜಿ. ಮಾತನಾಡಿದರು. ಶಾಲಾ ಮಕ್ಕಳು, ಪೋಷಕರು ಇದ್ದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರತಿಭಾಪುರಸ್ಕಾರ ವಿತರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.