ರಾಮನಗರ: ಭೂ ದಾಖಲೆಗಳಿಗೆ ಆಧುನಿಕ ಸ್ಪರ್ಶ ನೀಡಲು ಮುಂದಾಗಿರುವ ಕಂದಾಯ ಇಲಾಖೆಯು ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯಲ್ಲಿ ಪ್ರಾಯೋಗಿಕವಾಗಿ ಕೈಗೊಂಡಿದ್ದ ಡ್ರೋನ್ ಆಧಾರಿತ ಮರು ಭೂಮಾಪನ ಯೋಜನೆ ಪೂರ್ಣಗೊಂಡಿದೆ.
ಈ ಯೋಜನೆ ಅಡಿ ಜಮೀನಿನ ನಕ್ಷೆ, ಅಳತೆ, ಮಾಲೀಕತ್ವದ ವಿವರ ಸೇರಿ ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಇರುವ ಡಿಜಿಟಲ್ ಪಹಣಿ ವಿತರಣೆಗೆ ಸಿದ್ಧವಾಗಿವೆ.
ಹೋಬಳಿ ವ್ಯಾಪ್ತಿಯ 35 ಕಂದಾಯ ಗ್ರಾಮಗಳಲ್ಲಿ ಮರು ಭೂಮಾಪನಕ್ಕೆ 2023ರ ಆಗಸ್ಟ್ 14ರಂದು ಅಂದಿನ ಸಂಸದ ಡಿ.ಕೆ. ಸುರೇಶ್ ಅವರು ಚಾಲನೆ ನೀಡಿದ್ದರು.
ಯೋಜನೆಯ ನೋಡಲ್ ಅಧಿಕಾರಿಯಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಮನೀಷ್ ಮೌದ್ಗಿಲ್, ಯೋಜನಾ ನಿರ್ದೇಶಕರಾಗಿ ರಾಮನಗರ ಜಿಲ್ಲಾ ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕ ಬಿ.ಆರ್. ಹನುಮೇಗೌಡ ಹಾಗೂ ಹಾಸನ ಜಿಲ್ಲೆಯ ಉಪ ನಿರ್ದೇಶಕ ಸುಜಯ್ ಕುಮಾರ್ ಭೂ ಮರುಮಾಪನದ ವಿಶೇಷ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
23,469 ಪಹಣಿ: ‘ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಇಬ್ಬರು ಅಧೀಕ್ಷಕರು, ನಾಲ್ವರು ಪರ್ಯಾವೇಕ್ಷಕರು, 26 ಸರ್ಕಾರಿ ಭೂ ಮಾಪಕರು, 34 ಪರವಾನಗಿ ಭೂ ಮಾಪಕರು ಹಾಗೂ 16 ಬಾಂದು ಜವಾನರನ್ನು ಒಳಗೊಂಡ 89 ಸಿಬ್ಬಂದಿ ತಂಡ ಸತತ ನಾಲ್ಕು ತಿಂಗಳು ಒಟ್ಟು 5,706 ಸರ್ವೇ ನಂಬರ್ಗಳ ಮರು ಭೂಮಾಪನ ಮಾಡಿತ್ತು’ ಎಂದು ಬಿ.ಆರ್. ಹನುಮೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
‘ಜಮೀನು ಮಾಲೀಕರು ಕೊಟ್ಟ ದಾಖಲೆ ಪರಿಶೀಲಿಸಿ ಅವರ ಸಮ್ಮುಖದಲ್ಲೇ ಡ್ರೋನ್ ಸರ್ವೇ ಮಾಡಲಾಗಿತ್ತು. ನಂತರ ಎಲ್ಲಾ ಮಾಹಿತಿ ಕ್ರೋಡೀಕರಿಸಿ ಮರು ಪರಿಶೀಲಿಸಿ ಅಂತಿಮವಾಗಿ 23,469 ಡಿಜಿಟಲ್ ಪಹಣಿ ಸೃಜಿಸಲಾಗಿದೆ. ಇದರಿಂದಾಗಿ, ಸುಮಾರು 150 ವರ್ಷ ಹಳೆಯ ದಾಖಲೆಗಳಿಗೆ ಡಿಜಿಟಲ್ ಸ್ಪರ್ಶ ಸಿಕ್ಕಿದೆ’ ಎಂದು ಹೇಳಿದರು.
ಕ್ಯೂ–ಜಿಐಎಸ್ ತಂತ್ರಾಂಶದ ನಕ್ಷೆ: ‘ಭಾರತೀಯ ಸರ್ವೆ ಇಲಾಖೆ ರಾಜ್ಯದ 49 ಕಡೆ ನಿರಂತರ ಕಾರ್ಯಾಚರಣೆ ಉಲ್ಲೇಖ ವ್ಯವಸ್ಥೆಯ (ಸಿಒಆರ್ಎಸ್) ಬಿಂದುಗಳನ್ನು ಸ್ಥಾಪಿಸಿದೆ. ಅದರಲ್ಲಿ ಕನಕಪುರ ತಾಲ್ಲೂಕು ಕಚೇರಿ ಆವರಣವೂ ಇದೆ. ಇದರ ಆಧಾರದಲ್ಲಿ ಸುಮಾರು 100 ಮೀಟರ್ ಎತ್ತರದಲ್ಲಿ ಡ್ರೋನ್ ಹಾರಿಸಿ ಭೂಮಿ ಚಿತ್ರ ಸೆರೆ ಹಿಡಿಯಲಾಗಿದೆ’ ಎಂದು ತಿಳಿಸಿದರು.
‘ಚಿತ್ರವನ್ನು ಆರ್ಥೊರೆಕ್ಟಿಫೈಡ್ ಇಮೇಜ್ ಆಗಿ ಪರಿವರ್ತಿಸಿ ರೋವರ್ ಉಪಕರಣದ ನೆರವಿನಿಂದ ಜಮೀನಿನ ಬಿಂದುಗಳನ್ನು ಅಳತೆ ಮಾಡಲಾಗುತ್ತದೆ. ನಂತರ, ಬಿಂದುಗಳ ದತ್ತಾಂಶ ಬಳಸಿಕೊಂಡು ಕ್ಯೂ–ಜಿಐಎಸ್ ತಂತ್ರಾಂಶದಲ್ಲಿ ಪ್ರತಿ ಜಮೀನಿನ ನಕ್ಷೆ ತಯಾರಿಸಿ, ಹೊಸ ಮಾದರಿಯ ಭೂ ನಕ್ಷೆ ಸೃಜಿಸಲಾಗಿದೆ’ ಎಂದು ಮಾಹಿತಿ ನೀಡಿದರು
ಹಳೆಯ ಭೂ ದಾಖಲೆಗಳಿಗೆ ಆಧುನಿಕ ಸ್ಪರ್ಶ ಯೋಜನೆಯಡಿ 23,469 ಡಿಜಿಟಲ್ ಪಹಣಿ ಸೃಜನೆ 35 ಗ್ರಾಮಗಳಲ್ಲಿ ಸತತ 4 ತಿಂಗಳು ಭೂಮಾಪನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.