ADVERTISEMENT

ಗಮನ ಸೆಳೆದ ಆಹಾರ ಮೇಳ

​ಪ್ರಜಾವಾಣಿ ವಾರ್ತೆ
Published 4 ಜನವರಿ 2023, 5:12 IST
Last Updated 4 ಜನವರಿ 2023, 5:12 IST
ನಗರಸಭೆ ಅಧ್ಯಕ್ಷೆ ಬಿ.ಕೆ. ಪವಿತ್ರಾ ಆಹಾರ ಮೇಳ ಉದ್ಘಾಟಿಸಿ ವಿದ್ಯಾರ್ಥಿಗಳಿಂದ ಖರೀದಿ ನಡೆಸಿದರು. ಶಾಜಿಯಾ ಹಾಗೂ ಅಲ್ತಾಫ್‌ ಅಹಮ್ಮದ್ ಇದ್ದರು
ನಗರಸಭೆ ಅಧ್ಯಕ್ಷೆ ಬಿ.ಕೆ. ಪವಿತ್ರಾ ಆಹಾರ ಮೇಳ ಉದ್ಘಾಟಿಸಿ ವಿದ್ಯಾರ್ಥಿಗಳಿಂದ ಖರೀದಿ ನಡೆಸಿದರು. ಶಾಜಿಯಾ ಹಾಗೂ ಅಲ್ತಾಫ್‌ ಅಹಮ್ಮದ್ ಇದ್ದರು   

ರಾಮನಗರ: ಇಲ್ಲಿನ ಹೋಲಿ ಕ್ರೆಸೆಂಟ್ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಆಹಾರ ಮೇಳ ಗಮನ ಸೆಳೆಯಿತು.

ಅಂಗಡಿಗಳ ಮಾದರಿಯಲ್ಲಿ ಮಳಿಗೆಗಳನ್ನು ನಿರ್ಮಿಸಲಾಗಿತ್ತು. ಅವುಗಳಲ್ಲಿ ವಿದ್ಯಾರ್ಥಿಗಳೇ ಉತ್ಸಾಹದಿಂದ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ಅವುಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೂ ಇಟ್ಟಿದ್ದರು. ಅತಿಥಿಗಳು, ಪೋಷಕರು ಹಾಗೂ ಸಹಪಾಠಿಗಳು ಅದರ ರುಚಿ ಸವಿದರು.

ಎರಡು ದಿನಗಳ ಈ ‘ಕ್ರೆಸೆಂಟ್ ಫುಡ್ ಅಂಡ್ ಬ್ಯುಸಿನೆಸ್ ಬಜಾರ್’ ಹಬ್ಬಕ್ಕೆ ನಗರಸಭೆ ಅಧ್ಯಕ್ಷೆ ಬಿ.ಕೆ. ಪವಿತ್ರಾ ಚಾಲನೆ ನೀಡಿದರು. ವಿಜ್ಞಾನಮೇಳ, ಆಹಾರ ಹಬ್ಬದಂತಹ ಕಾರ್ಯಕ್ರಮಗಳು ಶಾಲಾ ಮಕ್ಕಳ ಜ್ಞಾನ ವೃದ್ದಿ ಮಾಡುವ ಜೊತೆಗೆ ಹೊರ ಪ್ರಪಂಚದ ವ್ಯವಹಾರಿಕ ಪರಿಜ್ಞಾನವನ್ನು ಕಟ್ಟಿಕೊಡುತ್ತವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಶಾಲೆಯ ಕಾರ್ಯದರ್ಶಿ ಅಲ್ತಾಫ್‌ ಅಹಮ್ಮದ್‌ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಜೊತೆಗೆ ವ್ಯವಹಾರಿಕ ಜ್ಞಾನವನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಲಿಕೆಯ ಹಂತದಲ್ಲಿ ಮಕ್ಕಳ ಅಭಿರುಚಿಯನ್ನು ಅರ್ಥ ಮಾಡಿಕೊಂಡು ಅವರನ್ನು ಪ್ರೋತ್ಸಾಹಿಸುವ ಕೆಲಸವನ್ನು ಪೋಷಕರು ಮತ್ತು ಶಿಕ್ಷಕರು ಮಾಡಬೇಕಾಗಿದೆ ಎಂದರು.

ಕಿರುತೆರೆ ನಟಿ ಸುಷ್ಮಿತಾ ಮಾತನಾಡಿ, ಶಾಲೆಯಲ್ಲಿ ಆಯೋಜಿಸಿರುವ ಆಹಾರ ಮೇಳ ನಿಮ್ಮಲ್ಲಿ ಹೊಸ ಬದಲಾವಣೆ ತರುವ ಜ್ಞಾನವನ್ನು ನೀಡುವಲ್ಲಿ ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಆಹಾರ ಪದ್ದತಿಯನ್ನು ಅನುಸರಿಸಿ ಆರೋಗ್ಯ ಕಾಪಾಡಿಕೊಳ್ಳುವತ್ತ ಹೆಚ್ಚು ಒತ್ತು ಕೊಡಿ ಎಂದು ಕಿವಿಮಾತು ಹೇಳಿದರು.

ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಶಾಜಿಯಾ, ಪ್ರಾಂಶುಪಾಲ ಎಸ್.ಶಿವಮೂರ್ತಿ, ಮುಖ್ಯ ಶಿಕ್ಷಕಿ ಪಿ. ಲತಾ, ಆಡಳಿತಾಧಿಕಾರಿ ಸ್ಟ್ಯಾನ್ಲಿಪಾಲ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.