ADVERTISEMENT

ಕುದೂರು: ರಿಯಲ್‌ ಎಸ್ಟೇಟ್‌ ಉದ್ಯಮಿ ಕಾರು ಅಡ್ಡಗಟ್ಟಿ ಲೂಟಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 4:56 IST
Last Updated 28 ಮಾರ್ಚ್ 2024, 4:56 IST
   

ಕುದೂರು: ಪರ್ವತನಪುರ ಬಳಿ ಕಾರೊಂದನ್ನು ಅಡ್ಡಗಟ್ಟಿದ ದರೋಡೆಕೋರರ ತಂಡ ಕಾರಿನಲ್ಲಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಅವರ ಜತೆಗಿದ್ದ ಮಹಿಳೆಗೆ ಚಾಕು ತೋರಿಸಿ ಹಣ ಮತ್ತು ಒಡವೆ ದರೋಡೆ ಮಾಡಿದ್ದಾರೆ. ವಾರದ ಹಿಂದೆಯೇ ಈ ಪ್ರಕರಣ ನಡೆದಿದ್ದರೂ, ಉದ್ಯಮಿ ತಡವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. 

ಬೆಂಗಳೂರಿನ ನಾಗರಬಾವಿಯ ರಿಯಲ್ ಎಸ್ಟೇಟ್ ಉದ್ಯಮಿ ರವಿ ಬಿ.ಎನ್. ಬಡಾವಣೆ ನಿರ್ಮಾಣಕ್ಕಾಗಿ ಕುದೂರು ಹೋಬಳಿಯ ಮರೂರು ಸುತ್ತಮುತ್ತ ಜಾಗ ಹುಡುಕುತ್ತಿದ್ದರು. ಮರೂರು ಗ್ರಾಮದ ವೀಣಾ ಕುಮಾರಿ ಎಂಬುವರು ತಮ್ಮ ಗ್ರಾಮದ ಹತ್ತಿರ ಕಡಿಮೆ ಬೆಲೆಗೆ ಮೂರು ಎಕರೆ ಜಮೀನು ಸಿಗುತ್ತದೆ. ಬಂದು ನೋಡುವಂತೆ ಉದ್ಯಮಿಗೆ ಹೇಳಿದ್ದರು.

ಅಂತೆಯೇ ಮಾರ್ಚ್ 20ರಂದು ಸಂಜೆ ಉದ್ಯಮಿ ರವಿ ಹಾಗೂ ವೀಣಾ ಕಾರಿನಲ್ಲಿ ಜಮೀನು ನೋಡಲು ಹೊರಟಿದ್ದರು. ಅಲ್ಲಿಂದ ವಾಪಸ್ ಬರುವಾಗ ಪರ್ವತನಪುರ ಬಳಿಯ ಮಣ್ಣಿನ ರಸ್ತೆ ಬದಿಯ ಮಾವಿನ ತೋಪಿನ ಬಳಿ ನಾಲ್ವರು ದರೋಡೆಕೋರ ತಂಡ ಕಾರು ಅಡ್ಡಗಟ್ಟಿದ್ದಾರೆ.

ADVERTISEMENT

ಚಾಕು ತೋರಿಸಿ ಇಬ್ಬರನ್ನೂ ಕಾರಿನಿಂದ ಇಳಿಸಿದ ದರೋಡೆಕೋರರ ಗುಂಪು ಉದ್ಯಮಿಯ ಕೈಯಲ್ಲಿದ್ದ 40 ಗ್ರಾಂ ಚಿನ್ನದ ಕಡಗ, 18 ಗ್ರಾಂ ಚಿನ್ನದ ಉಂಗುರ, 60 ಗ್ರಾಂ ಚಿನ್ನದ ಸರ, ₹ 25 ಸಾವಿರ ನಗದು ಹಾಗೂ ಐ–ಫೋನ್ ಕಿತ್ತುಕೊಂಡಿದ್ದಾರೆ. ಇದಕ್ಕೂ ಮೊದಲು ಬಟ್ಟೆ ಬಿಚ್ಚಿಸಿ ವಿಡಿಯೊ ಮಾಡಿದ್ದಾರೆ. ವೀಣಾ ಬಳಿ ಇದ್ದ ಫೋನ್ ಹಾಗೂ ಚಿನ್ನದ ಸರವನ್ನೂ ಕಿತ್ತುಕೊಂಡು ಹೋಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸರಿಗೆ ದೂರು ನೀಡಿದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಅಪ್‌ಲೋಡ್‌ ಮಾಡಲಾಗುವುದು ಎಂದೂ ಬೆದರಿಸಿದ ಕಾರಣ ತಡವಾಗಿ ದೂರು ನೀಡುತ್ತಿರುವುದಾಗಿ ಕುದೂರು ಪೊಲೀಸ್ ಠಾಣೆಗೆ ಉದ್ಯಮಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.