ADVERTISEMENT

ವಾಹನ ಉರುಳಿ 18 ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2019, 12:22 IST
Last Updated 8 ಮಾರ್ಚ್ 2019, 12:22 IST
ಗಾಯಾಳುಗಳನ್ನು ಸ್ಥಳೀಯರು ಆಸ್ಪತ್ರೆಗೆ ಕರೆತಂದರು
ಗಾಯಾಳುಗಳನ್ನು ಸ್ಥಳೀಯರು ಆಸ್ಪತ್ರೆಗೆ ಕರೆತಂದರು   

ರಾಮನಗರ: ತಾಲ್ಲೂಕಿನ ಮಾಯಗಾನಹಳ್ಳಿ ಸಮೀಪ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಶುಕ್ರವಾರ ಬೆಳಗ್ಗೆ ಟಾಟಾ ಏಸ್‌ ವಾಹನ ಉರುಳಿ 18 ಮಂದಿ ಗಾಯಗೊಂಡರು.

ರಾಮನಗರದ ಕೊತ್ತೀಪುರದಿಂದ ಹಾರೋಹಳ್ಳಿ ಹೋಬಳಿಯ ಕಗ್ಗಲಹಳ್ಳಿಗೆ ಮಗುವಿನ ಹುಟ್ಟುಹಬ್ಬ ಆಚರಣೆಗಾಗಿ ಸರಕು ಸಾಗಣೆ ವಾಹನದಲ್ಲಿ 30 ಮಂದಿ ಹೊರಟಿದ್ದರು. ಈ ಸಂದರ್ಭ ಹೆದ್ದಾರಿಯ ಇಳಿಜಾರಿನಲ್ಲಿ ವಾಹನವು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹಳ್ಳಕ್ಕೆ ಉರುಳಿಬಿತ್ತು.

ಘಟನೆಯಲ್ಲಿ ರಾಮನಗರ, ಕೊತ್ತೀಪುರ, ಹೊಸೂರು. ಹುಣನಸಹಳ್ಳಿ ಗ್ರಾಮಗಳ ನಿವಾಸಿಗಳಾದ ಪ್ರೇಮಕುಮಾರಿ, ಜಯಮ್ಮ, ಉಮಾ, ಮಂಜುಳಾ, ದುರ್ಗೇಶ್, ಪುಟ್ಟತಾಯಮ್ಮ, ತೇಜಸ್ವಿನಿ, ಶ್ರೀಕಂಠರಾಜು, ಸೇವಂತ್, ಜಯಲಕ್ಷ್ಮಿ ಹಾಗೂ ವಾಹನ ಚಾಲಕ ಜಗದೀಶ್ ಗಾಯಗೊಂಡರು. ಭಾಗ್ಯಮ್ಮ, ಮಂಜಮ್ಮ, ತಾಯಕ್ಕ ಸೇರಿ ಆರು ಮಂದಿಗೆ ಹೆಚ್ಚಿನ ಗಾಯಗಳಾಗಿದ್ದು, ಬೆಂಗಳೂರಿಗೆ ಕರೆದೊಯ್ಯಲಾಯಿತು. ಉಳಿದವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.

ADVERTISEMENT

ಸ್ಥಳೀಯರ ನೆರವು: ಪ್ರಯಾಣಿಕರ ಕಿರುಚಾಟ ಕೇಳಿ ಸ್ಥಳೀಯರು ಹಾಗೂ ವಾಹನ ಸವಾರರು ನೆರವಿಗೆ ಧಾವಿಸಿದರು. ಇದೇ ಹಾದಿಯಲ್ಲಇಿ ಹೊರಟಿದ್ದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್‌ ನಟರಾಜು ಸಹ ತಮ್ಮ ಕಾರಿನಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದರು. ಇನ್ನೂ ಕೆಲವರನ್ನು ಟಾಟಾ ಏಸ್‌ ವಾಹನದಲ್ಲಿಯೇ ಆಸ್ಪತ್ರೆಗೆಕರೆತರಲಾಯಿತು.

ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಕೆಲವು ಕಾಲ ವಾಹನಗಳ ಸಂಚಾರಕ್ಕೆ ಅಡಚಣೆ ಆಯಿತು. ರಾಮನಗರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.