ADVERTISEMENT

ಕೊರೊನಾ ಸೋಂಕು ತಡೆಯೇ ಅಧಿಕಾರಿಗಳ ಗುರಿ: ಡಿ.ಸಿ ರಾಕೇಶ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 3:45 IST
Last Updated 19 ಏಪ್ರಿಲ್ 2021, 3:45 IST
ಡಾ.ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‌ಕುಮಾರ್‌ ಮಾತನಾಡಿದರು
ಡಾ.ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‌ಕುಮಾರ್‌ ಮಾತನಾಡಿದರು   

ಕನಕಪುರ: ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಸಾರ್ವಜನಿಕರು ಸರ್ಕಾರ ಜಾರಿಗೊಳಿಸಿ ರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಯಮ ಉಲ್ಲಂಘನೆ ಮಾಡಿದವರಿಗೆ ತಾಲ್ಲೂಕು ಆಡಳಿತ ಯಾವುದೇ ಮುಲಾಜಿಗೆ ಒಳಗಾಗದೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‌ಕುಮಾರ್ ಸೂಚಿಸಿದರು.

ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾಡಳಿತದಿಂದ ಕೊರೊನಾ ಸೋಂಕು ತಡೆ ಸಂಬಂಧ ಭಾನುವಾರ ನಡೆದ ಕಂದಾಯ, ನಗರಾಡಳಿತ, ತಾಲ್ಲೂಕು ಪಂಚಾಯಿತಿ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ವಿಶೇಷ ಸಭೆಯಲ್ಲಿ ಮಾತನಾಡಿದರು.

ಕೋವಿಡ್‌ ಎರಡನೇ ಅಲೆಯು ಹೆಚ್ಚು ಭೀಕರವಾಗಿದೆ. ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಹಿಂದಿನ ವರ್ಷ ಜಿಲ್ಲೆಯಲ್ಲಿ ಸೋಂಕು ತಡೆಗಟ್ಟಲು ಉತ್ತಮ ಕೆಲಸ ಮಾಡಲಾಗಿತ್ತು. ಅದೇ ರೀತಿ ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸಿ ಸೋಂಕು ಹರಡದಂತೆ ಜಾಗೃತಿವಹಿಸಬೇಕಿದೆ ಎಂದು ಹೇಳಿದರು.

ADVERTISEMENT

ಸೋಂಕು ಹರಡದಂತೆ ತಡೆಗಟ್ಟಲು ಸರ್ಕಾರ ಜಾರಿಗೊಳಿಸಿರುವ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜಾತ್ರೆ, ಸಭೆ, ಸಮಾರಂಭ, ಜನರು ಗುಂಪು ಸೇರದಂತೆ ಮಾಡಬೇಕು. ಚಿತ್ರಮಂದಿರ, ವ್ಯಾಪಾರ ಸ್ಥಳ, ಕಲ್ಯಾಣ ಮಂಟಪ ಮೊದಲಾದ ಸ್ಥಳಗಳಿಗೆ ಒಮ್ಮೆ ನೀಡಿ ಸೂಚನೆ ನೀಡಬೇಕು. ಯಾವುದೇ ಒತ್ತಡಗಳಿಗೆ ಮಣಿಯಬಾರದು ಎಂದು ತಿಳಿಸಿದರು.

ಆರೋಗ್ಯ, ಕಂದಾಯ ಇಲಾಖೆ, ತಾಲ್ಲೂಕು ಪಂಚಾಯಿತಿ, ನಗರಸಭೆಯು ಸೋಂಕು ಹರಡದಂತೆ ತಡೆಗಟ್ಟಲು ಮುಖ್ಯವಾಹಿನಿಯಲ್ಲಿ ಕೆಲಸ ಮಾಡಬೇಕು. ಉಳಿದ ಇಲಾಖೆಗಳು ಇದಕ್ಕೆ ಸಂಪೂರ್ಣ ಸಹಕಾರ ನೀಡಬೇಕು. ಎಲ್ಲಿಯೂ ಲೋಪ ಬರದಂತೆ ಎಚ್ಚರಹಿಸಿ ಕೆಲಸ ಮಾಡಬೇಕು ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ. ಗಿರೀಶ್‌ ಮಾತನಾಡಿ, ಗ್ರಾಮ ಮಟ್ಟದಲ್ಲಿ ನಡೆಯುವ ಊರ ಹಬ್ಬಗಳು, ಮದುವೆ, ಜಾತ್ರೆ, ದೇವರ ಉತ್ಸವಗಳು ಸ್ಥಳೀಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. 15 ದಿನ ಮುಂಚಿತವಾಗಿಯೇ ತಿಳಿದುಕೊಂಡು ಕಾರ್ಯಕ್ರಮವನ್ನು ಸ್ಥಗಿತಗೊಳಿಸಬೇಕು. ನಾಳೆ ನಡೆಯುತ್ತದೆ ಎಂದು ಇಂದು ಹೋಗಿ ನಿಲ್ಲಿಸಬೇಡಿ. ಜನರೊಂದಿಗೆ ಅನುಚಿತವಾಗಿ ವರ್ತಿಸಬಾರದು. ಯಾವುದೇ ಘರ್ಷಣೆಗೆ ಅವಕಾಶ ಕೊಡದಂತೆ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ,ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ಜಿ.ಎಲ್‌. ಪದ್ಮಾ, ಡಿವೈಎಸ್‌ಪಿ ಕೆ.ಎನ್‌. ರಮೇಶ್‌, ತಹಶೀಲ್ದಾರ್‌‌ ವಿ.ಆರ್‌. ವಿಶ್ವನಾಥ್‌, ಪೌರಾಯುಕ್ತ ರಾಘವೇಂದ್ರ, ಟಿಎಚ್‌ಒ ಡಾ.ಬಿ. ನಂದಿನಿ, ಸರ್ಕಲ್‌ ಇನ್‌ಸ್ಪೆಕ್ಟರ್‌ಗಳಾದ ಟಿ.ಟಿ. ಕೃಷ್ಣ, ರಾಮಪ್ಪ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.