ಮಾಗಡಿ: ವರನಟ ಡಾ.ರಾಜ್ಕುಮಾರ್ ಕನ್ನಡಿಗರ ಸಾಂಸ್ಕೃತಿಕ ಕಲಾ ಪರಂಪರೆಯ ಸಾಕ್ಷಿಪ್ರಜ್ಞೆ ಆಗಿದ್ದರು ಎಂದು ಕನ್ನಡಪರ ಹೋರಾಟಗಾರ ಎಂ.ಆರ್.ಬಸವರಾಜು ಈಡಿಗ ಅಭಿಪ್ರಾಯಪಟ್ಟರು.
ಪಟ್ಟಣದ ಕಲ್ಯಾಬಾಗಿಲು ನಾರಸಿಂಹ ಸರ್ಕಲ್ನಲ್ಲಿ ಡಾ.ರಾಜ್ಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಬುಧವಾರ ನಡೆದ ‘ಡಾ.ರಾಜ್ಕುಮಾರ್ ಅವರ 91ನೇ ಜನ್ಮದಿನಾಚರಣೆ’ಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ರಾಜ್ಕುಮಾರ್ ವಿನಯವಂತಿಕೆಯ ಪ್ರತಿರೂಪವಾಗಿದ್ದರು. ಗೋಕಾಕ್ ಚಳವಳಿಯಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು.ಅವರ ಪಾತ್ರಗಳು ನೈತಿಕತೆ, ನಿಷ್ಠೆ ಮತ್ತು ಸತ್ಯದಿಂದ ಕೂಡಿರುತ್ತಿದ್ದವು. ಈ ಪಾತ್ರಗಳು ನಮಗೆ ಮಾದರಿ’ ಎಂದರು.
ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಗಂಗಣ್ಣ ಮಾತನಾಡಿ, ಮುಂದಿನ ವರ್ಷದ ಜಯಂತಿ ಒಳಗೆ ಅಭಿಮಾನಿಗಳ ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಕಲ್ಯಾಬಾಗಿಲು ಬಳಿ ಡಾ.ರಾಜ್ ಪುತ್ಥಳಿ ನಿರ್ಮಿಸುವ ಉದ್ದೇಶವಿದೆ ಎಂದರು.
ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಮಾತನಾಡಿ, ರಾಜ್ ಅವರು ನಾಡು-ನುಡಿ, ನೆಲೆ-ಜಲದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ ಅರ್ಪಣೆಯಿಂದ ಹೋರಾಟ ಮಾಡಿದ ಧೀಮಂತ ಚೇತನ ಎಂದರು.
ತಾಲ್ಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಜಿ.ಗೋಪಾಲ್, ಕಾರ್ಯದರ್ಶಿ ಆರ್.ಚಂದ್ರಶೇಖರ್, ಉಪಾಧ್ಯಕ್ಷ ಆರ್.ರೇಣುಕಾ, ಖಜಾಂಚಿ ಪುಟ್ಟಸ್ವಾಮಿ, ಸದಸ್ಯರಾದ ಮೋಹನ್ ಕದಂಬ, ಎಂ.ವೈ.ರೇಣುಕಪ್ಪ, ಬಸವರಾಜು, ಮೋಹನ್ ಕುಮಾರ್, ಆರ್.ಮಂಜುನಾಥ್, ಯತಿರಾಜ್, ಎಂ.ಎ.ಲೋಕೇಶ್, ಎಂ.ಎನ್.ವಾಸುದೇವ್, ಸಿದ್ದರಾಜು ಈಡಿಗ, ಅಗಲಕೋಟೆ ರಾಮಯ್ಯ, ಕುದೂರಿನ ವೆಂಕಟೇಶ್, ಸೋಲೂರಿನ ವೆಂಕಟಾಚಲಯ್ಯ, ಬಾಣವಾಡಿ ಕೃಷ್ಣಪ್ಪ ಡಾ.ರಾಜ್ ವಿಚಾರಧಾರೆಗಳನ್ನು ಕುರಿತು ಮಾತನಾಡಿದರು.
ಮುಖಂಡರಾದ ಡಿಂಗ್ರಿ ನರಸಿಂಹಯ್ಯ, ಗಣಪತಿ ಶಿಲ್ಪಿ ಉಮಾಶಂಕರ್, ಎಂ.ನಾಗೇಂದ್ರ, ಹಸೀನ್ ಸಿಂಹ ಹಾಗೂ ಅಭಿಮಾನಿಗಳು ಇದ್ದರು.ಅಭಿಮಾನಿಗಳು ಅಣ್ಣಾ ಅವರ ಸಿನಿಮಾದ ಜನಪ್ರಿಯ ಗೀತೆಗಳನ್ನು ಹಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.