ರಾಮನಗರ: ಎಳೆಯ ಪ್ರಾಯದ ಮಕ್ಕಳಿಗೆ ಸಂಬಂಧಿಕರೇ ಮದ್ಯ ಕುಡಿಸಿ ವಿಕೃತಿ ಮೆರೆದಿದ್ದು, ಘಟನೆ ಸಂಬಂಧ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಕನಕಪುರ ತಾಲ್ಲೂಕಿನ ಕೋಡಿಹಳ್ಳಿ ಹೋಬಳಿಯ ಮರಳಿಪುರ ಗ್ರಾಮದ ಗಣೇಶ್ ಬಂಧಿತ. ಇನ್ನಿಬ್ಬರು ಆರೋಪಿಗಳಾದ ಪ್ರಮೋದ್ ಹಾಗೂ ಸೋಮಸುಂದರ್ ತಲೆಮರೆಸಿಕೊಂಡಿದ್ದಾರೆ.
ಈ ಮೂವರು ಮರಳಿಪುರ ಗ್ರಾಮದ ಬಾಳೆ ತೋಟವೊಂದರಲ್ಲಿ ಈಚೆಗೆ ಏಳು ಬಾಲಕರನ್ನು ಸೇರಿಸಿಕೊಂಡು ಮದ್ಯ ಪಾರ್ಟಿ ನಡೆಸಿದ್ದರು. ಮಕ್ಕಳಿಗೂ ಮದ್ಯ ಕುಡಿಸಿ ವಿಡಿಯೊ ಮಾಡಿಕೊಂಡಿದ್ದರು. ಈ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಈ ಹಿನ್ನೆಲೆಯಲ್ಲಿ ಜಾಗೃತಗೊಂಡ ಪೊಲಿಸರು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಗೆ ಕೋವಿಡ್: ಬಂಧಿತ ಆರೋಪಿ ಗಣೇಶ್ನನ್ನು ಪೊಲೀಸರು ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದು, ಕೋವಿಡ್ ಪಾಸಿಟಿವ್ ಬಂದಿದೆ. ಸದ್ಯ ಈತನನ್ನು ಕ್ವಾರಂಟೈನ್ನಲ್ಲಿ ಇಡಲಾಗಿದೆ. ಇದರಿಂದಾಗಿ ಪಾರ್ಟಿಯಲ್ಲಿ ಪಾಲ್ಗೊಂಡ ಮಕ್ಕಳಿಗೂ ಸೋಂಕು ಹರಡಿರುವ ಭೀತಿ ಎದುರಾಗಿದೆ.
ಮಕ್ಕಳಿಗೆ ಕೌನ್ಸೆಲಿಂಗ್: ಪ್ರಕರಣ ನಡೆದ ಗ್ರಾಮಕ್ಕೆ ಸೋಮವಾರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದರು.
‘ವಿಡಿಯೊದಲ್ಲಿ ಇರುವವರೆಲ್ಲ 8ರಿಂದ 13 ವರ್ಷದ ಒಳಗಿನವರಾಗಿದ್ದಾರೆ. ಇವರ ಆರೋಗ್ಯ ತಪಾಸಣೆ ಮಾಡಿಸಿದ್ದು, ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ಎಲ್ಲರಿಗೂ ಆಪ್ತ ಸಮಾಲೋಚನೆ ಸಹ ಮಾಡಿದ್ದು, ವಿಡಿಯೊ ಕಾನ್ಫರೆನ್ಸ್ ಮೂಲಕ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿದ್ದೇವೆ’ ಎಂದು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಾಹಿತಿ ನೀಡಿದರು.
* ಮಕ್ಕಳಿಗೆ ಮದ್ಯ ಕುಡಿಸಿದ ವಿಡಿಯೊದಲ್ಲಿ ಇರುವವರೆಲ್ಲ ಸಂಬಂಧಿಕರೇ ಆಗಿದ್ದಾರೆ. ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈಗಾಗಲೇ ಒಬ್ಬನ ಬಂಧನವಾಗಿದೆ
-ಗಿರೀಶ್, ಎಸ್.ಪಿ, ರಾಮನಗರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.