ಚನ್ನಪಟ್ಟಣ: ಸಮ ಸಮಾಜದ ನಿರ್ಮಾಣಕ್ಕೆ ಸಮರೋಪಾದಿಯಲ್ಲಿ ಹೋರಾಟ ಕೈಗೊಂಡು, ಭಾರತೀಯರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆ ಅನುಕರಣೀಯ ಎಂದು ಸಾಹಿತಿ ವಿಜಯ್ ರಾಂಪುರ ತಿಳಿಸಿದರು.
ಪಟ್ಟಣದ ಮಹಾಲಕ್ಷ್ಮಿ ಬಡಾವಣೆಯಲ್ಲಿ ರಾಂಪುರದ ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಬುಧವಾರ ಏರ್ಪಡಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 130ನೇ ಜನ್ಮ ದಿನಾಚರಣೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಅಂಬೇಡ್ಕರ್ ಅವರ ಶೋಷಿತರ ಪರವಾದ ನಿಲುವು, ಮಹಿಳಾ ಸಬಲೀಕರಣದ ತುಡಿತ, ಮಾನವೀಯ ಮೌಲ್ಯ, ಆರ್ಥಿಕ ಮತ್ತು ಸಾಮಾಜಿಕ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ತನ್ನ ಇಡೀ ಬದುಕನ್ನು ಸಮಾಜಕ್ಕೆ ಮೀಸಲಿರಿಸಿದ ಈ ಯುಗಪುರುಷನ ಆಶಯಗಳನ್ನು ಪೋಷಿಸಿಕೊಂಡು ಹೋಗಬೇಕಾದ ಜವಾಬ್ದಾರಿ ಸಮಾಜದ ಮೇಲಿದೆ ಎಂದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉಪ ವ್ಯವಸ್ಥಾಪಕ ಶ್ರೀಹರ್ಷ ಕುಲಕರ್ಣಿ ಮಾತನಾಡಿ, ವಿಶ್ವ ಶ್ರೇಷ್ಠ ಅಂಬೇಡ್ಕರ್ ಅವರ ಕ್ರಿಯಾಶೀಲತೆ, ಹೋರಾಟದ ಮನೋಭಾವ, ಬದ್ಧತೆ, ಪ್ರಾಮಾಣಿಕತೆ ಮತ್ತು ಆದರ್ಶಗಳನ್ನು ಮೈಗೂಡಿಸಿಕೊಂಡು ಹೋಗಬೇಕು ಎಂದು ಹೇಳಿದರು.
ಜನಪದ ಗಾಯಕ ಚೌ.ಪು. ಸ್ವಾಮಿ, ಮುಖಂಡ ಟಿ. ಅಪ್ಪಾಜಿ, ಗಾಯಕರಾದ ಎಂ.ಆರ್. ಸುಶೀಲಮ್ಮ, ಎಂ.ಎ. ತುಳಸೀಧರ, ಸುದರ್ಶನ್ ಹಾಜರಿದ್ದರು. ಕ್ರಾಂತಿ ಗೀತೆಗಳನ್ನುಹಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.