ADVERTISEMENT

ಬುದ್ಧ, ಬಸವ, ಅಂಬೇಡ್ಕರ್ ವಿಶ್ವಮಾನ್ಯರು: ಡಾ. ರವಿ ಯು.ಎಂ

ಜನಮುಖಿ ಟ್ರಸ್ಟ್‌ನಿಂದ ಅಂಬೇಡ್ಕರ್, ಬಸವ ಜಯಂತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 5 ಮೇ 2025, 12:44 IST
Last Updated 5 ಮೇ 2025, 12:44 IST
ರಾಮನಗರ ತಾಲ್ಲೂಕಿನ ಕುಂಬಾಪುರ ಕಾಲೊನಿಯಲ್ಲಿ ಜನಮುಖಿ ಟ್ರಸ್ಟ್ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಬಸವ ಜಯಂತಿ ಕಾರ್ಯಕ್ರಮ ಜರುಗಿತು. ಜಾನಪದ ಲೋಕದ ಕ್ಯೂರೇಟರ್ ಡಾ. ರವಿ ಯು.ಎಂ, ಟ್ರಸ್ಟ್ ಕಾರ್ಯದರ್ಶಿ  ಕುಂಬಾಪುರ ಬಾಬು, ನಾಗರಾಜ್ ಸಿಂಗ್, ಪುಟ್ಟಸ್ವಾಮಿ, ಡಾ. ಸಂದೀಪ್ ಹಾಗೂ ಇತರರು ಇದ್ದಾರೆ
ರಾಮನಗರ ತಾಲ್ಲೂಕಿನ ಕುಂಬಾಪುರ ಕಾಲೊನಿಯಲ್ಲಿ ಜನಮುಖಿ ಟ್ರಸ್ಟ್ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಬಸವ ಜಯಂತಿ ಕಾರ್ಯಕ್ರಮ ಜರುಗಿತು. ಜಾನಪದ ಲೋಕದ ಕ್ಯೂರೇಟರ್ ಡಾ. ರವಿ ಯು.ಎಂ, ಟ್ರಸ್ಟ್ ಕಾರ್ಯದರ್ಶಿ  ಕುಂಬಾಪುರ ಬಾಬು, ನಾಗರಾಜ್ ಸಿಂಗ್, ಪುಟ್ಟಸ್ವಾಮಿ, ಡಾ. ಸಂದೀಪ್ ಹಾಗೂ ಇತರರು ಇದ್ದಾರೆ   

ರಾಮನಗರ: ‘ಭಾರತದ ನೆಲದಲ್ಲಿ ಹುಟ್ಟಿದ ಮಹನೀಯರಾದ ಬುದ್ಧ, ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ವಿಶ್ವಮಾನ್ಯರು. ಅವರ ವಿಚಾರಧಾರೆಗಳಿಗೆ ವಿಶ್ವದಾದ್ಯಂತ ಮನ್ನಣೆ ಸಿಕ್ಕಿದೆ. ಭಾರತದಂತಹ ಜಾತಿಗ್ರಸ್ತ ನೆಲದಲ್ಲಿ ಸಮ ಸಮಾಜ ನಿರ್ಮಾಣಕ್ಕೆ ಬುನಾದಿ ಹಾಕಿದ ಈ ಮೂವರ ಜೀವನ ಮತ್ತು ತತ್ವಾದರ್ಶಗಳನ್ನು ಇಡೀ ಜಗತ್ತು ಗೌರವಿಸಿದೆ’ ಎಂದು ಜಾನಪದ ಲೋಕದ ಕ್ಯೂರೇಟರ್ ಡಾ. ರವಿ ಯು.ಎಂ ಹೇಳಿದರು.

ತಾಲ್ಲೂಕಿನ ಕುಂಬಾಪುರ ಕಾಲೊನಿಯಲ್ಲಿ ಜನಮುಖಿ ಟ್ರಸ್ಟ್ ಇತ್ತೀಚೆಗೆ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಬೇರೂರಿದ್ದ ಜಾತಿ ವ್ಯವಸ್ಥೆ, ಅಸಮಾನತೆ ಹಾಗೂ ಕಂದಾಚಾರಗಳ ವಿರುದ್ಧ ದನಿ ಎತ್ತಿದ್ದ ಮೂವರೂ ಮಹನೀಯರು, ತಮ್ಮ ಬದುಕಿನುದ್ದಕ್ಕೂ  ಅವುಗಳ ವಿರುದ್ಧ ಸಮರ ಸಾರಿ ಮುಕ್ತಿ ಮಾರ್ಗವನ್ನು ತೋರಿದರು’ ಎಂದರು.

‘ಸಮ ಸಮಾಜದ ಕನಸು ಕೇವಲ ಮಾತುಗಳಲ್ಲಿ ಉಳಿಯದೆ ವಾಸ್ತವವಾಗಿ ಆಚರಣೆಗೆ ಬರಬೇಕಾದರೆ, ಈ ಮೂವರು ಮಹನೀಯರ ವಿಚಾರಧಾರೆಗಳನ್ನು ಅರಿಯಬೇಕು. ಬದುಕಿನಲ್ಲಿ ಅಳವಡಿಸಿಕೊಂಡು ಅನುಸರಿಸಬೇಕು. ಬಸವಣ್ಣನವರು ಸಾಮಾಜಿಕ ಕ್ರಾಂತಿ ಜೊತೆಗೆ ವಚನಗಳ ಮೂಲಕ ಸಮಾಜವನ್ನು ಜಾಗೃತಗೊಳಿಸಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಎಲ್ಲಾ ರೀತಿಯ ಅಸಮಾನತೆ ವಿರುದ್ಧ ಹೋರಾಡಿದ ಅಂಬೇಡ್ಕರ್ ಅವರು, ಸರ್ವರನ್ನೂ ಸಮವಾಗಿ ಕಾಣುವ ಹಾಗೂ ಸಮಾನ ಹಕ್ಕುಗಳನ್ನು ಒದಗಿಸುವ ದೇಶದ ಧರ್ಮ ಗ್ರಂಥ ಎನಿಸಿರುವ ಸಂವಿಧಾನ ರಚಿಸಿದರು. ಆ ಮೂಲಕ, ದನಿ ಇಲ್ಲದವರಿಗೆ ದನಿಯಾಗಿ ಸಾಮಾಜಿಕ ನ್ಯಾಯದ ಹರಿಕಾರರಾದರು. ಅವರ ತತ್ವಾದರ್ಶಗಳ ಪಾಲನೆಯಿಂದ ಮಾತ್ರ ಸಮಜದ ಉನ್ನತಿ ಸಾಧ್ಯ’ ಎಂದು ಅಭಿಪ್ರಾಯಟಪ್ಟರು.

‘ಸಂವಿಧಾನ ರಚನೆ ಬಗ್ಗೆ ಹಲವರು ಟೀಕೆಗಳನ್ನು ಮಾಡುತ್ತಾರೆ. ಅವುಗಳಿಗೆ ಯಾವುದೇ ಆಧಾರವಿಲ್ಲ. ಅಂಬೇಡ್ಕರ್ ಕುರಿತು ಮತ್ಸರದಿಂದ ಬಂದಿರುವ ಟೀಕೆಗಳನ್ನು ನಿರ್ಲಕ್ಷ್ಯಿಸಬೇಕು. ಸಂವಿಧಾನ ರಚನಾ ಮಂಡಳಿಯಲ್ಲಿ ಹಲವರಿದ್ದರೂ, ದಿನದ 18 ಗಂಟೆಗಳ ಕಾಲ ಸಂವಿಧಾನ ರಚನೆಯ ಕೆಲಸ ಮಾಡಿದ ಏಕೈಕ ವ್ಯಕ್ತಿ ಅಂಬೇಡ್ಕರ್. ಹಾಗಾಗಿಯೇ ಅವರನ್ನು ಸಂವಿಧಾನ ಶಿಲ್ಪಿ ಎನ್ನಲಾಗುತ್ತದೆ’ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಜನಮುಖಿ ಟ್ರಸ್ಟ್ ಕಾರ್ಯದರ್ಶಿ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕುಂಬಾಪುರ ಬಾಬು, ನಾಗರಾಜ್ ಸಿಂಗ್, ಪುಟ್ಟಸ್ವಾಮಿ, ಡಾ. ಸಂದೀಪ್, ಹರೀಶ್, ಗಿರಿಯಪ್ಪ, ಶಂಕರ್, ಶ್ರೀನಿವಾಸ್, ಎಚ್.ಸಿ. ರಾಮಣ್ಣ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.