ADVERTISEMENT

ಬಾಲ ಕಳೆದುಕೊಂಡ ಸಲಗ

ಚಿಕಿತ್ಸೆಗೆ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 19:46 IST
Last Updated 4 ನವೆಂಬರ್ 2020, 19:46 IST
ಆನೆಯ ಬಾಲ ತುಂಡಾಗಿರುವುದು
ಆನೆಯ ಬಾಲ ತುಂಡಾಗಿರುವುದು   

ಕನಕಪುರ: ಕಾವೇರಿ ವನ್ಯಧಾಮದ ಸಂಗಮ ವಲಯದಲ್ಲಿ ಎರಡು ಕಾಡಾನೆಗಳ ನಡುವೆ ಹೊಡೆದಾಟದಲ್ಲಿ ಒಂದು ಆನೆಯ ಬಾಲ ತುಂಡಾಗಿದ್ದು, ಗಾಯದಲ್ಲಿ ನೊಣ ಹಾಗೂ ಇತರ ಕೀಟಗಳು ಕುಳಿತುಕೊಳ್ಳುವುದನ್ನು ತಪ್ಪಿಸಲು ಅದು ನೀರಿನಲ್ಲಿ ಹೋಗಿ ನಿಂತಿದೆ.

ಮಂಗಳವಾರ ಎರಡು ಆನೆಗಳ ನಡುವೆ ಹೊಡೆದಾಟ ನಡೆದಿದೆ ಎನ್ನಲಾಗಿದೆ. ಈ ಆನೆಯ ಸದ್ಯದ ಸ್ಥಿತಿಗತಿಯನ್ನು ಪರಿಶೀಲಿಸಿ ಅಗತ್ಯಬಿದ್ದರೆ ಚಿಕಿತ್ಸೆ ನೀಡಲು ಅರಣ್ಯ ಇಲಾಖೆ ಮುಂದಾಗಿದೆ.

ಮತ್ತಿಗೋಡು ಶಿಬಿರದಲ್ಲಿರುವ ಅಭಿಮನ್ಯು ಹಾಗೂ ಕೃಷ್ಣ ಆನೆಗಳನ್ನು ಕರೆಸಿ, ಬನ್ನೇರುಘಟ್ಟದ ಪಶುವೈದ್ಯ ಡಾ.ಉಮಾಶಂಕರ್‌ ಅವರ ಸಹಾಯದಿಂದ ಚಿಕಿತ್ಸೆ ಕೊಡಿಸಲು ಸಿದ್ಧತೆ ನಡೆಸಿದ್ದಾರೆ.

ADVERTISEMENT

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್‌ ಕುಮಾರ್‌ ಅವರು, ‘ಕಾದಾಟದ ಸಂದರ್ಭದಲ್ಲಿ ಆನೆಗಳು ಎದುರಾಳಿ ಆನೆಯ ಬಾಲವನ್ನು ತುಂಡರಿಸುತ್ತವೆ. ಇಲ್ಲೂ ಅದೇ ರೀತಿ ಆಗಿದೆ. ಹೊಡೆದಾಟದ ನಂತರ ನೊಣಗಳು ಹಾಗೂ ಕೀಟಗಳಿಂದ ಗಾಯವನ್ನು ರಕ್ಷಿಸಿಕೊಳ್ಳಲು ಆನೆ ನೀರಿನಲ್ಲಿ ಹೋಗಿ ನಿಂತಿದೆ. ನೀರಿನಿಂದ ಅದು ಮೇಲೆ ಬರುತ್ತಿಲ್ಲ’ ಎಂದರು.

‘ಸಾಮಾನ್ಯವಾಗಿ ಗಾಯ ತನ್ನಿಂತಾನೆ ಒಣಗುತ್ತದೆ. ಈ ಪ್ರಕರಣದಲ್ಲಿ ಗಾಯದ ಸ್ಥಿತಿ ಹೇಗಿದೆ ಎಂಬುದನ್ನು ನೋಡಬೇಕಾಗುತ್ತದೆ. ಅಗತ್ಯ ಬಿದ್ದರೆ ಸಣ್ಣ ಪ್ರಮಾಣದಲ್ಲಿ ಅರಿವಳಿಕೆ ನೀಡಿ ಚಿಕಿತ್ಸೆ ನೀಡಬಹುದು. ನಾನು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇನೆ. ಒಂದು ವೇಳೆ ಚಿಕಿತ್ಸೆ ನೀಡಬೇಕಾದರೆ, ಎರಡು ಸಾಕಾನೆಗಳ ನೆರವು ಪಡೆಯಬೇಕಾಗುತ್ತದೆ. ಪಶು ವೈದ್ಯರು ಬೇಕಾಗುತ್ತಾರೆ. ಕಾರ್ಯಾಚರಣೆ ನಡೆಸಲು ಒಪ್ಪಿಗೆ ಸಿಕ್ಕಿದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.