ಕನಕಪುರ: ಇಲ್ಲಿನ ನಗರಸಭೆಯ 1ನೇ ವಾರ್ಡ್ನ ಮಳಗಾಳು ಗ್ರಾಮದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದು, ನಗರಸಭೆಯಿಂದ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಯಿತು.
ಗ್ರಾಮದಲ್ಲಿ ಕೊರೊನಾ ಸೋಂಕು ಉಲ್ಬಣಗೊಂಡಿದೆ. ಸೋಂಕು ನಿವಾರಣೆಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮಳಗಾಳು ಜನತೆ ನಗರಸಭೆಗೆ ಮನವಿ ಮಾಡಿದ್ದರು. ಅಧ್ಯಕ್ಷ ಮುಕ್ಬುಲ್ ಪಾಷ ಅವರ ನೇತೃತ್ವದಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಯಿತು.
ಸೊಳ್ಳೆಗಳ ನಿಯಂತ್ರಣಕ್ಕಾಗಿ ಫಾಗ್ ಸಿಂಪಡಣೆ ಮಾಡಿದ ಅಧಿಕಾರಿಗಳು ಕೊರೊನಾ ಜಾಗೃತಿ ಬಗ್ಗೆ ಗ್ರಾಮದಲ್ಲಿ ಸಭೆ ನಡೆಸಿದರು. 45 ವರ್ಷ ಮೇಲ್ಪಟ್ಟ ಎಲ್ಲರೂ ಕೋವಿಡ್ ವ್ಯಾಕ್ಸಿನ್ ತೆಗೆದುಕೊಳ್ಳುವಂತೆ ಮನವಿ ಮಾಡಿದರು. ಎರಡು ಬಾರಿ ಗ್ರಾಮದಲ್ಲಿ ಲಸಿಕೆ ಸಭೆ ನಡೆಸಿದ್ದರಿಂದ ಬಹುತೇಕ ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.
ಕೋವಿಡ್ ಸೋಂಕಿತರು ಈಗಾಗಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೊಂದಿಗೆ ಸಂಪರ್ಕ ಹೊಂದಿದ್ದವರ ಕೊರೊನಾ ತಪಾಸಣೆ ನಡೆಸಲಾಗಿದ್ದು, ಇನ್ನೂ ಫಲಿತಾಂಶ ಬರಬೇಕಿದೆ. ಪರೀಕ್ಷೆಗೆ ಒಳಗಾಗಿರುವವರು ಸ್ವಯಂಪ್ರೇರಣೆಯಿಂದ ಮನೆಗಳಲ್ಲೇ ಕ್ವಾರಂಟೈನ್ ಆಗಿದ್ದಾರೆ.
‘ಗ್ರಾಮದಲ್ಲಿ ಕೊರೊನಾ ಸೋಂಕು ಉಲ್ಬಣಿಸಿದೆ. ಸೋಂಕು ತಡೆಗಾಗಿ ನಾವು ಮಾಡಿದ ಮನವಿಗೆ ನಗರಸಭೆಯವರು ಎಲ್ಲಾ ರೀತಿಯ ಪ್ರಯತ್ನ ನಡೆಸಿದ್ದಾರೆ. ಸೋಂಕು ನಿಯಂತ್ರಣಕ್ಕೆ ಸ್ಯಾನಿಟೈಸ್ ಮಾಡಿ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಅದಕ್ಕೆ ಗ್ರಾಮದ ಜನತೆ ಸಂಪೂರ್ಣವಾಗಿ ಸಹಕರಿಸುತ್ತಿದ್ದಾರೆ’ ಎಂದು ಗ್ರಾಮಸ್ಥ ಮರಸಪ್ಪ ರವಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.