ADVERTISEMENT

ಪ್ರಶಿಕ್ಷಣಾರ್ಥಿಗಳಿಗೆ ಕೌಶಲ ಮುಖ್ಯ: ನೆ.ಲ. ನರೇಂದ್ರ ಬಾಬು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 13:10 IST
Last Updated 4 ಫೆಬ್ರುವರಿ 2020, 13:10 IST
ಜಾನಪದ ಲೋಕದಲ್ಲಿ 'ಸಾಮುದಾಯಿಕ ಜೀವನ ಶಿಬಿರ' ನಡೆಯಿತು
ಜಾನಪದ ಲೋಕದಲ್ಲಿ 'ಸಾಮುದಾಯಿಕ ಜೀವನ ಶಿಬಿರ' ನಡೆಯಿತು   

ರಾಮನಗರ: ಶಿಕ್ಷಕರಾದವರಿಗೆ, ಪ್ರಶಿಕ್ಷಣಾರ್ಥಿಗಳಿಗೆ ಸಂಪರ್ಕ ಕೌಶಲ ಮುಖ್ಯ ಎಂದು ಕೆಟಿಎಸ್ ವಿ ಸಂಘದ ಅಧ್ಯಕ್ಷ ನೆ.ಲ. ನರೇಂದ್ರ ಬಾಬು ಹೇಳಿದರು.

ಬೆಂಗಳೂರು ರಾಜಾಜಿನಗರ ಶಿಕ್ಷಣ ಮಹಾವಿದ್ಯಾಲಯದ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಇಲ್ಲಿನ ಜಾನಪದ ಲೋಕದಲ್ಲಿ ಆಯೋಜಿಸಿದ್ದ 'ಸಾಮುದಾಯಿಕ ಜೀವನ ಶಿಬಿರ' ದಲ್ಲಿ ಅವರು ಮಾತನಾಡಿದರು.

ಭವಿಷ್ಯದ ಸತ್ಪ್ರಜೆಗಳನ್ನು ರೂಪಿಸುವ ಹೊಣೆಗಾರಿಕೆ ನಿಮ್ಮ ಮೇಲಿದೆ. ಹಾಗಾಗಿ ಉತ್ತಮ ಸಂಪರ್ಕ ಕೌಶಲವುಳ್ಳ ವಿದ್ಯಾರ್ಥಿಗಳನ್ನು ತಯಾರು ಮಾಡಲು ತಾವು ತೊಡಗಿಸಿಕೊಳ್ಳುವ ಜತೆಗೆ ಜೀವನವನ್ನು ಸಮಾಜದ ಏಳಿಗೆಗಾಗಿ ಸಮರ್ಪಿಸಿಕೊಳ್ಳಬೇಕು ಎಂದು ತಿಳಿಸಿದರು.

ADVERTISEMENT

ಶಿಕ್ಷಣವನ್ನು ಭೂಮಿ, ಹಣ ನೀಡಿದಷ್ಟು ಸುಲಭವಾಗಿ ಕೊಡಲು ಸಾಧ್ಯವಿಲ್ಲ. ಅದನ್ನು ಪಡೆಯುವವರಲ್ಲೂ ಹಾಗೂ ನೀಡುವವರಲ್ಲೂ ಅಷ್ಟೇ ಶ್ರದ್ಧೆ, ವಿನಯ, ತಾಳ್ಮೆ ಬಹಳ ಮುಖ್ಯ. ಹಾಗಾದಲ್ಲಿ ಮಾತ್ರ ಜ್ಞಾನಾರ್ಜನೆಯ ಸಿಹಿಯನ್ನು ಸವಿಯಲು ಸಾಧ್ಯ ಎಂದು ತಿಳಿಸಿದರು.

‘ಶಿಕ್ಷಕರು ಸಮುದಾಯದ ಅದರ ಅಭಿವೃದ್ಧಿಗೆ ತೊಡಗಿಸಿಕೊಳ್ಳಲು ಎಲ್ಲರ ಮನಸ್ಸನ್ನು ಅರ್ಥೈಸಿಕೊಳ್ಳಬೇಕಾದ ಸನ್ನಿವೇಶಗಳು ಎದುರಾಗುತ್ತದೆ. ಅಂತಹ ಸಂದರ್ಭಗಳನ್ನು ನಿಭಾಯಿಸಬೇಕಾದಲ್ಲಿ ಮನಃಶಾಸ್ತ್ರ ಅನಿವಾರ್ಯವಾಗಿರುತ್ತದೆ. ಸಮಾಜದಲ್ಲಿ ಪ್ರತಿಯೊಬ್ಬರೂ ಆದರ್ಶಗಳನ್ನು, ಮೌಲ್ಯಗಳನ್ನು ಇಟ್ಟುಕೊಳ್ಳಬೇಕು. ಹಾಗಾದಲ್ಲಿ ಮಾತ್ರ ನಮ್ಮ ದೇಶವನ್ನು ಪ್ರಪಂಚದಲ್ಲಿಯೇ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಇಂತಹ ಶಿಬಿರಗಳು ಪ್ರಶಿಕ್ಷಣಾರ್ಥಿಗಳಿಗೆ ಅವಶ್ಯಕ’ ಎಂದರು.

ಅಂಬೇಡ್ಕರ್ ಶಿಕ್ಷಣ ಮಹಾವಿದ್ಯಾಲಯದ ಡಿ.ಎನ್. ನಂಜುಂಡಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರಮುಖವಾಗಿ ಶ್ರದ್ಧೆ, ಸಮಯ ಪ್ರಜ್ಞೆ, ಇಚ್ಛಾಶಕ್ತಿ, ದೈಹಿಕ ಕ್ಷಮತೆ, ಚತುರತೆ, ಶಿಸ್ತು ಮುಖ್ಯವಾಗಿರಬೇಕು. ಇವುಗಳನ್ನು ಆವಾಹನೆ ಮಾಡಿದವರು ಉತ್ತಮ ಪ್ರಜೆಗಳನ್ನು ರೂಪಿಸಬಲ್ಲ ಶಕ್ತಿ ಸಂಪಾದಿಸುತ್ತಾರೆ ಎಂದು ತಿಳಿಸಿದರು.

ಕೆಟಿಎಸ್ ವಿ ಸಂಘದ ಕಾರ್ಯದರ್ಶಿ ಕೆಂಪಯ್ಯ ಶಿಬಿರ ಉದ್ಘಾಟಿಸಿದರು. ಪ್ರಾಚಾರ್ಯ ಡಾ. ಕೃಷ್ಣಮೂರ್ತಿ ಇದ್ದರು. ಶಿಬಿರಾಧಿಕಾರಿ ಡಾ. ಶಿವರಾಮಯ್ಯ ಸ್ವಾಗತಿಸಿದರು. ಡಾ. ಯೋಗೇಶ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.