
ಕುದೂರು: ಕೊಯ್ಲಿಗೆ ಬಂದ ಅಡಿಕೆ ಕದಿಯಲು ಶನಿವಾರ ರಾತ್ರಿ ಬಿಸ್ಕೂರು ತೋಟಕ್ಕೆ ನುಗ್ಗಿದ ಮೂವರು ಕಳ್ಳರನ್ನು ಗ್ರಾಮಸ್ಥರು ಹಿಡಿದು ಕುದೂರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಳೆದ ಒಂದು ವಾರದಿಂದ ಬಿಸ್ಕೂರು ಮತ್ತು ಕೋಡಿಹಳ್ಳಿ ಗ್ರಾಮಗಳ ಸುತ್ತಮುತ್ತ ಕೋಯ್ಲಿಗೆ ಬಂದ ಅಡಿಕೆ, ಬಾಳೆಗೋನೆಗಳನ್ನು ರಾತ್ರಿ ವೇಳೆ ಕದಿಯಲಾಗುತ್ತಿತ್ತು. ವಾಹನಗಳಲ್ಲಿ ಬಂದು ಬಾಳೆಗೊನೆ, ಅಡಿಕೆ ಕದಿಯುತ್ತಿದ್ದ ಕಳ್ಳರನ್ನು ಹಿಡಿಯಲು ಗ್ರಾಮಸ್ಥರು ರಾತ್ರಿ ಕಾವಲು ಕಾಯುತ್ತಿದ್ದರು.
ಬಿಸ್ಕೂರು ಕೆರೆ ಏರಿ ಹಿಂಭಾಗದ ಕೋಡಿಹಳ್ಳಿ-ಬಿಸ್ಕೂರು ರಸ್ತೆ ಪಕ್ಕದ ಪದ್ಮನಾಭ ಎಂಬುವರ ತೋಟದಲ್ಲಿ ಗ್ರಾಮಸ್ಥರು ಕಳ್ಳರಿಗಾಗಿ ಹೊಂಚು ಹಾಕಿ ಕುಳಿತಿದ್ದರು. ನಿರೀಕ್ಷೆಯಂತೆ ಶನಿವಾರ ತಡರಾತ್ರಿ ತೋಟಕ್ಕೆ ನುಗ್ಗಿದ ಮೂವರು ಕಳ್ಳರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದರು.
ಬೆಂಗಳೂರು ನಂಬರ್ ಪ್ಲೇಟ್ ಹೊಂದಿದ (ಕೆಎ 04 ಎಂಜೆಡ್ 0017)ಕಾರಿನಲ್ಲಿ ಬಂದಿದ್ದ ಅಡಿಕೆ ಕಳ್ಳರ ಬಳಿ ಗೋಣಿ ಚೀಲ, ಅಡಿಕೆ ಕೊಯ್ಯುವ ಜವಳಿ ಕೋಲು ಪತ್ತೆಯಾಗಿವೆ. ಮೂವರನ್ನು ಬಂಧಿಸಿ, ಕಳ್ಳತನಕ್ಕೆ ಬಳಸಿದ ಕಾರು ಸಮೇತ ಎಲ್ಲವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.