ರಾಮನಗರ: ಇಲ್ಲಿನ ಜಾನಪದ ಲೋಕದಲ್ಲಿ ದೇವರದೊಡ್ಡಿಯ ಕಾಂತನಾಯಕ ಮತ್ತು ತಂಡದವರು ಭಾನುವಾರ ಪೂಜಾ ಕುಣಿತ ಪ್ರದರ್ಶಿಸಿದರು.
ಕನ್ನಡ ಮತ್ತ ಸಂಸ್ಕೃತಿ ಇಲಾಖೆ ವತಿಯಿಂದ ಜನಪದ ಕಲಾವಿದರಿಗೆ ಕಾರ್ಯಕ್ರಮಗಳನ್ನು ನೀಡುತ್ತಾರೆ. ಆದರೆ, ಹಣವನ್ನು ಸರಿಯಾದ ಸಮಯಕ್ಕೆ ಕೊಡುವುದಿಲ್ಲ. ಇದರಿಂದ ಕಲಾವಿರದರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಸರ್ಕಾರದ ಕಾರ್ಯಕ್ರಮಗಳಲ್ಲಿ ಪ್ರದರ್ಶನ ಮುಗಿದ ಕೂಡಲೆ ಕಲಾವಿದರಿಗೆ ಹಣ ನೀಡಿದರೆ ಅನುಕೂಲವಾಗುತ್ತದೆ ಎಂದು ಕಲಾವಿದ ಕಾಂತನಾಯಕ ತಿಳಿಸಿದರು.
‘20 ವರ್ಷಗಳಿಂದ ಪೂಜಾ ಕುಣಿತವನ್ನು ಪ್ರದರ್ಶಿಸುತ್ತಿದ್ದೇನೆ. ಪೂಜಾ ಕುಣಿತಕ್ಕೆ ಈಗಲೂ ಬೇಡಿಕೆ ಇದೆ. ಜನಪದ ಕಲೆಗಳ ಪ್ರದರ್ಶನದಿಂದ ಉತ್ತಮವಾದ ಜೀವನ ನಡೆಸಬಹುದು’ ಎಂದು ಅವರು ಹೇಳಿದರು.
ಕಲಾವಿದ ಕುಮಾರ್ ಬಾನಂದೂರು ಮಾತನಾಡಿ, ಸರ್ಕಾರದ ವತಿಯಿಂದ ಕಲಾವಿದರಿಗೆ ಗುರುತಿನ ಚೀಟಿ ನೀಡಬೇಕು. ಇದರಿಂದ ಕಲಾವಿದರಿಗೆ ಅನುಕೂಲವಾಗುತ್ತದೆ. ಜನಪದ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಪದ ಕಲೆಗಳ ಪ್ರದರ್ಶನವನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
ಸರ್ಕಾರಿ ಕಾರ್ಯಕ್ರಮಗಳು ಅರ್ಹ ಕಲಾವಿದರಿಗೆ ಸಿಗುತ್ತಿಲ್ಲ. ಇದರಿಂದ ನೈಜ ಕಲಾವಿದರಿಗೆ ಜೀವನ ನಡೆಸಲು ಕಷ್ಟವಾಗುತ್ತಿದೆ. ಆದ್ದರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ನೈಜ ಕಲಾವಿದರನ್ನು ಗುರುತಿಸಿ ಕಾರ್ಯಕ್ರಮಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಕಲಾವಿದರಾದ ಗಿರೀಶ್, ಮಧು, ಶ್ರೀನಿವಾಸ್, ಭರತ್, ಶರತ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.