ರಾಮನಗರ: ಮುಂದಿನ ದಿನಗಳಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ಚರ್ ಅವರಿಗೆ ಅಧಿಕಾರ ಸಿಗಲಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ರಾಮದೇವರ ಬೆಟ್ಟಕ್ಕೆ ಶುಕ್ರವಾರ ಭೇಟಿ ನೀಡಿ ಪಟ್ಟಾಭಿರಾಮ ದೇವರಿಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಮುಂದೆ ಸರ್ಕಾರದ ವತಿಯಿಂದ ವಿಧಾನ ಪರಿಷತ್ ಗೆ ನಾಮ ನಿರ್ದೇಶನಗಳು ನಡೆಯಲಿವೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಪಕ್ಷದ ವರಿಷ್ಠರು ಯೋಗೇಶ್ವರ್ ಅವರಿಗೆ ಅಧಿಕಾರ ನೀಡಲಿದ್ದಾರೆ ಎಂದರು. ಎಚ್. ವಿಶ್ವನಾಥ್ ಸೇರಿದಂತೆ ಹಲವರಿಗೆ ಎಂಎಲ್ ಸಿ ಟಿಕೆಟ್ ತಪ್ಪಿರುವ ಕುರಿತಂತೆ ಪ್ರತಿಕ್ರಿಯೆ ನೀಡದ ಡಿಸಿಎಂ, ಟಿಕೆಟ್ ತಪ್ಪಿದ ನಂತರ ಸಭೆ ನಡೆಸಿರುವ ಬಗ್ಗೆಯೂ ಮಾಹಿತಿ ಇಲ್ಲ ಎಂದರು.
ರಾಮ ಬಂದು ಹೋಗಿರುವ ರಾಮನಗರದ ರಾಮದೇವರ ಬೆಟ್ಟಕ್ಕೆ ಬೇಟಿ ನೀಡಿ ಪಟ್ಟಾಭಿರಾಮನ ಅನುಗ್ರಹ ಪಡೆಯಲು ಆಗಮಿಸಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸಮಗ್ರ ಕುರಿತಂತೆ ಚರ್ಚಿಸಲು ಪ್ರಥಮ ಕೆಡಿಪಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ರಣಹದ್ದುಗಳು ಇರುವ ವನ್ಯಜೀವಿ ಧಾಮವೂ ಇದಾಗಿದ್ದು ಅಳಿವಿನಂಚಿನಲ್ಲಿರುವ ರಣಹದ್ದುಗಳ ರಕ್ಷಣೆ ಮತ್ತು ಸಂತತಿ ಅಭಿವೃದ್ದಿಗೆ ಕ್ರಮವಹಿಸಲಾಗುವುದು ಎಂದರು.
ಇದೇ ವೇಳೆ ಅವರು ಬೆಟ್ಟದ ಆವರಣದಲ್ಲಿ ಗಿಡ ನೆಟ್ಟರು. ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಎಸ್ಪಿ ಅನೂಪ್ ಎ.ಶೆಟ್ಟಿ, ಜಿ.ಪಂ. ಸಿಇಒ ಇಕ್ರಂ, ಡಿಸಿಎಫ್ ಸದಾಶಿವ ಹೆಗಡೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.