ರಾಮನಗರ: ಅಸಂಘಟಿತ ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ, ಅವರ ಭವಿಷ್ಯವನ್ನು ಉಜ್ವಲವಾಗಿಸುವತ್ತ ಗಮನ ಹರಿಸಬೇಕು. ಶಿಕ್ಷಣವೊಂದೇ ಬಡವರು ತಮ್ಮ ಬದುಕು ಬದಲಿಸಿಕೊಳ್ಳಲು ಇರುವ ಅಸ್ತ್ರ. ಹಾಗಾಗಿ, ಕಾರ್ಮಿಕರು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಕಿರಣ್ ಸಲಹೆ ನೀಡಿದರು.
ನಗರದ ಸ್ಪಂದನ ಕಚೇರಿಯಲ್ಲಿ ಇತ್ತೀಚೆಗೆ ಅಸಂಘಟಿತ ವಲಯದ ಮಹಿಳಾ ಕಾರ್ಮಿಕರಿಗೆ ಹಮ್ಮಿಕೊಂಡಿದ್ದ, ‘ಸ್ತ್ರೀವಾದ ಮತ್ತು ಅಸಂಘಟಿತ ಕಾರ್ಮಿಕರು’ ವಿಷಯ ಕುರಿತ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಅಸಂಘಟಿತ ಕ್ಷೇತ್ರದ ಕಟ್ಟಡ ನಿರ್ಮಾಣ ಕಾರ್ಮಿಕರು, ಬೀಡಿ ಕಾರ್ಮಿಕರು ಮತ್ತು ಕೃಷಿ ಕಾರ್ಮಿಕರ ಕೆಲಸ ಮಾಡುವ ಸ್ಥಳದ ಮೇಲೆ ಪುರುಷ ಪ್ರಧಾನ ವ್ಯವಸ್ಥೆಯು ತನ್ನದೇ ಆದ ಪರಿಣಾಮ ಬೀರಿದೆ’ ಎಂದರು.
‘ಸ್ತ್ರೀವಾದದ ಆಲೋಚನೆಗಳನ್ನು ಪುರುಷರು ಸಹ ಅಳವಡಿಸಿಕೊಳ್ಳುವುದರಿಂದ ಲಿಂಗ ಪ್ರಧಾನ ವ್ಯವಸ್ಥೆಯ ದೌರ್ಜನ್ಯಕ್ಕೆ ಕಡಿವಾಣ ಹಾಕಬಹುದು. ಪುರುಷ ಪ್ರಧಾನತೆಯು ಮಹಿಳೆಯರ ಮೇಲಿನ ಶೋಷಣೆ ಸಾಧನವಾಗಿಯೂ ಬಳಕೆಯಾಗುತ್ತದೆ. ಮತ್ತೊಂದಡೆ ಪುರುಷರಿಗೂ ಒತ್ತಡ ಮತ್ತು ಸೀಮಿತತೆಯನ್ನು ಒಂದು ರೀತಿಯಲ್ಲಿ ತರುತ್ತದೆ’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ಪಂದನ ಸಂಸ್ಥೆಯ ಮಾಲಿನಿ, ಅಂತರ್ಜನಂ, ಅಶ್ವತ, ಕಾವ್ಯ, ಅರ್ಶಿಯಾ, ಯಶೋಧ, ರಾಜೇಶ್ವರಿ, ಮಹಾಲಕ್ಷ್ಮಿ, ಮೇಘನಾ ಹಾಗೂ 60ಕ್ಕೂ ಹೆಚ್ಚು ಕಾರ್ಮಿಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.