
ಮಾಗಡಿ: ಅಕ್ರಮವಾಗಿ ನಿರ್ಮಿಸಿಕೊಂಡ ಮನೆಗಳನ್ನು ಸಕ್ರಮಗೊಳಿಸುವ ಮೊದಲ ಹಂತವಾಗಿ ರೂಪಿಸಲಾದ 'ಬಿ-ಖಾತೆ' ಆಂದೋಲನ ಪುರಸಭೆ ವ್ಯಾಪ್ತಿಯಲ್ಲಿ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಗ್ರಾಹಕರಲ್ಲಿ ಕಾಣಬೇಕಾದ ಉತ್ಸಾಹ ಕಾಣದಿರುವ ಹಿನ್ನೆಲೆಯಲ್ಲಿ ಈ ಆಂದೋಲನ ವಿಫಲಗೊಂಡಿದೆ.
ನಿವಾಸಿಗಳು 'ಬಿ-ಖಾತೆ'ಯನ್ನು ಮೂಲ ಸಮಸ್ಯೆಗಳಿಗೆ ಪರಿಹಾರವಾಗಿ ನೋಡುತ್ತಿಲ್ಲ. ಅಕ್ರಮ ನಿರ್ಮಾಣಕ್ಕೆ ಸಕ್ರಮ ಮಾನ್ಯತೆ ('ಎ-ಖಾತೆ') ಸಿಕ್ಕಾಗ ಮಾತ್ರ ಆಸ್ತಿ ಸಂಪೂರ್ಣವಾಗಿ ಕಾನೂನು ಬದ್ಧವಾಗುತ್ತದೆ. 'ಎ-ಖಾತೆ'ಯಿಂದ ಆಸ್ತಿ ಮೌಲ್ಯ ಹೆಚ್ಚಳ, ಬ್ಯಾಂಕ್ಗಳಿಂದ ಸಾಲ ಸೌಲಭ್ಯ ಮತ್ತು ಆಸ್ತಿ ಮೇಲೆ ಪೂರ್ಣ ಹಕ್ಕು ಸಿಗುವ ಪ್ರಮುಖ ಪ್ರಯೋಜನಗಳು ಲಭಿಸುತ್ತವೆ.
ಪುರಸಭೆ ವ್ಯಾಪ್ತಿಯ ನಿವಾಸಿಗಳಾದ ಕುಮಾರ್, ಶ್ರೀಧರ್, ಜಯಶ್ರೀ ಮತ್ತು ಲೋಕೇಶ್ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಬಿ-ಖಾತೆ ಮಾಡಿಸಿಕೊಂಡರೆ ಕೇವಲ ಪುರಸಭೆಗೆ ನಾವು ಸೇರಿದ್ದೇವೆ ಎಂಬ ದಾಖಲಾತಿ ಮಾತ್ರ ದೊರೆಯುತ್ತದೆ. ಆಸ್ತಿ ಸಂಪೂರ್ಣವಾಗಿ ಸಕ್ರಮವಾಗುವುದಿಲ್ಲ’ ಎಂದು ವಿವರಿಸಿದರು.
ಅಲ್ಲದೆ, ಬಿ-ಖಾತೆಯಿಂದ ಎ-ಖಾತೆಗೆ ಮತ್ತೆ ಪರಿವರ್ತನೆಗೆ ಬೇಕಾದ ಹೊಸ ಅರ್ಜಿ ಮತ್ತು ಹೆಚ್ಚಿನ ತೆರಿಗೆ ಪಾವತಿಯ ಅಡಚಣೆಯಿದೆ. ಇದರಿಂದಾಗಿ ಸರಳವಾದ ತೆರಿಗೆ ರೀತಿಯಲ್ಲಿ ನೇರವಾಗಿ 'ಎ-ಖಾತೆ'ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದರೆ ಈ ಯೋಜನೆ ಜನಪ್ರಿಯವಾಗಬಹುದು ಎಂದು ಸೂಚಿಸಿದ್ದಾರೆ. ಸರ್ಕಾರ ಕೇವಲ ಹಣ ಸಂಗ್ರಹಿಸಲು ಈ ಆಂದೋಲನ ಮಾಡಿದೆ ಎಂಬ ಅನುಮಾನ ನಮ್ಮಲ್ಲಿ ಉಂಟಾಗಿದೆ ಎಂದು ಆರೋಪಿಸಿದ್ದಾರೆ.
ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 12,000 ಅಕ್ರಮ ಖಾತೆಗಳಿವೆ ಎಂದು ಅಂದಾಜಿಸಲಾಗಿದೆ. ಆದರೆ, ಇದುವರೆಗೆ ಮಾತ್ರ 6,000 ಖಾತೆಗಳನ್ನು ಮಾತ್ರ ಸಕ್ರಮಗೊಳಿಸಲಾಗಿದೆ. ಇವುಗಳಲ್ಲಿ 5,000 'ಎ-ಖಾತೆ'ಗಳಾಗಿದ್ದು, ಕೇವಲ 1,000 ಮಾತ್ರ 'ಬಿ-ಖಾತೆ'ಗಳಾಗಿವೆ. ಹಿಂದೆ ರೆಕಾರ್ಡ್ ಆಗಿದ್ದ ಕೆಲವು ನಕಲಿ ಖಾತೆಗಳು ಸಹ ಇಲ್ಲಿ ಸೇರಿವೆ. ಹೆಚ್ಚಿನ ತೆರಿಗೆ ಪಾವತಿ ಆತಂಕದಿಂದಾಗಿಯೇ ನಿವಾಸಿಗಳು 'ಬಿ-ಖಾತೆ'ಗೆ ಮುಂದೆ ಬರುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ಪುರಸಭೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಈ-ಸೇವೆ ಸುಗಮಗೊಳಿಸಲು, ಈ-ಖಾತೆ (e-Khata) ವ್ಯವಸ್ಥೆಗೆ ಸರ್ವರ್ ನವೀಕರಣ ಮಾಡಲಾಗಿತ್ತು. ಇದರಿಂದ ಒಂದು ತಿಂಗಳ ಕಾಲ ಈ-ಖಾತೆ ಸೇವೆಗಳು ತಡೆಹಿಡಿಯಲ್ಪಟ್ಟಿದ್ದವು. ಈಗ ಜೂನ್ 5ರಿಂದ ಹೊಸ 'ತಂತ್ರಾಂಶ 2.0' ಪ್ರಾರಂಭವಾಗಿದೆ. ಹಳೆ ಮತ್ತು ಹೊಸ ಖಾತೆಗಳೆರಡೂ ಆನ್ಲೈನ್ನಲ್ಲಿ ಲಭ್ಯವಾಗಿವೆ. ಸಾರ್ವಜನಿಕರು 'ಸಿಟಿಜನ್ ಲಾಗಿನ್' ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೊಸ ತಂತ್ರಾಂಶಕ್ಕೆ ಸಾಮಾನ್ಯವಾಗಿರುವಂತೆ ಕೆಲವು ಸಮಸ್ಯೆಗಳು ಕೇಳಿ ಬಂದರೂ ಅವುಗಳನ್ನು ನಿವಾರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ಪ್ರತಿಕ್ರಿಯಿಸಿ, ‘ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಬಿ-ಖಾತೆಯನ್ನು ಎ-ಖಾತೆಯಾಗಿ ಪರಿವರ್ತಿಸಲು ಸಾಧ್ಯವಿಲ್ಲ. ಸರ್ಕಾರವೇ ನೇರವಾಗಿ 'ಎ-ಖಾತೆ'ಗೆ ಅವಕಾಶ ನೀಡಿದರೆ ನಿಯಮಾನುಸಾರ ಅದನ್ನು ಕಾರ್ಯರೂಪಕ್ಕೆ ತರಬಹುದು. ಸರ್ಕಾರದ ನೀತಿಯು ನಿಜವಾದ ಗ್ರಾಹಕ-ಸ್ನೇಹಿ ಮತ್ತು ಸಮಸ್ಯೆ-ನಿರ್ಮೂಲನೆ ದೃಷ್ಟಿಕೋನದಿಂದ ರೂಪುಗೊಂಡರೆ ಮಾತ್ರವೇ ಈ ಗೊಂದಲದ ಪರಿಸ್ಥಿತಿಗೆ ಪರಿಹಾರ ಸಾಧ್ಯ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.