ಕನಕಪುರ: ಇಲ್ಲಿನ ಉಯ್ಯಂಬಳ್ಳಿ ಹೋಬಳಿ ಏಳಗಳ್ಳಿ ಗ್ರಾಮದ ತಾಯಿ ಮುದ್ದಮ ದೇವರಿಗೆ ಬಿಟ್ಟಿದ್ದ ಬಸವ ಹಿಪ್ಪನೇರಳೆ ರೇಷ್ಮೆ ಸೊಪ್ಪನ್ನು ತಿಂದು ಸಾವನ್ನಪ್ಪಿದೆ.
ಗ್ರಾಮದಲ್ಲಿ ಸುಮಾರು 20 ವರ್ಷಗಳ ಹಿಂದೆ ಭಕ್ತರೊಬ್ಬರು ದೇವಿಗೆ ಬಿಟ್ಟಿದ್ದ ಬಸವ ಇದಾಗಿದ್ದು, ಎಲ್ಲರ ಜಮೀನಿನಲ್ಲಿ ಸ್ವೇಚ್ಛೆಯಾಗಿ ಮೇವನ್ನು ತಿಂದು ಆರೋಗ್ಯವಾಗಿತ್ತು. ಕೆಲವು ದಿನಗಳ ಹಿಂದ ರೈತರೊಬ್ಬರು ರೇಷ್ಮೆಸೊಪ್ಪಿಗೆ ತಗಲುವ ಹುಳುವನ್ನು ನಿಯಂತ್ರಿಸಲು ಕ್ರಿಮಿನಾಶಕ ಸಿಂಪಡಿಸಿದ್ದು ಆ ಸೊಪ್ಪನ್ನು ತಿಂದು ಬಸವ ಅನಾರೋಗ್ಯಕ್ಕೆ ಸಿಲುಕಿತ್ತು.
ಗ್ರಾಮಸ್ಥರು ಬಸವನ ಆರೈಕೆಗಾಗಿ ಪಶುವೈದ್ಯರನ್ನು ಕರೆಸಿ 15 ದಿನಗಳಿಂದ ಚಿಕಿತ್ಸೆ ಕೊಡಿಸುತ್ತಿದ್ದರು. ವೈದ್ಯರು ನೀಡಿದ ಔಷಧಿಯಿಂದ ಚೇತರಿಕೆ ಕಾಣದ ಬಸವ ಸೋಮವಾರ ರಕ್ತ ವಾಂತಿಮಾಡಿಕೊಂಡು ಸಾವನ್ನಪ್ಪಿದೆ.
ಗ್ರಾಮಸ್ಥರು ಸೇರಿ ಬಸವನಿಗೆ ಪೂಜೆ ನೆರವೇರಿಸಿ ಗ್ರಾಮದಲ್ಲಿ ಅದರ ಸಂಸ್ಕಾರ ನೆರವೇರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.