ಚನ್ನಪಟ್ಟಣ: ಸಮಾಜದ ಹಿತಕ್ಕಾಗಿ ಜೀವನ ಮುಡುಪಾಗಿಟ್ಟಿದ್ದ ಬಸವಣ್ಣ ಅವರ ಸಮಾಜಪರ ಚಿಂತನೆಗಳನ್ನು ತಿಳಿಸಿಕೊಡುವ ಕೆಲಸವಾಗಬೇಕು ಎಂದು ಪತ್ರಕರ್ತ ಸು.ತ.ರಾಮೇಗೌಡ ಅಭಿಪ್ರಾಯಪಟ್ಟರು.
ನಗರದ ಕುವೆಂಪುನಗರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ವತಿಯಿಂದ ಬುಧವಾರ ನಡೆದ ಬಸವಣ್ಣ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಶೋಷಿತ ಹಾಗೂ ಕೆಳವರ್ಗದವರ ಹಿತಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟವರು. ಸಮಾಜದ ಅಂಕುಡೊಂಕನ್ನು ತಮ್ಮ ವಚನಗಳ ಮೂಲಕ ತಿದ್ದಿದವರು ಬಸವಣ್ಣ. ಅವರ ಜಯಂತಿಯನ್ನು ಆಚರಣೆಗಷ್ಟೇ ಸೀಮಿತ ಮಾಡಬಾರದು. ಅವರ ವಿಚಾರಗಳನ್ನು ಪ್ರತಿಯೊಬ್ಬರಿಗೂ ತಿಳಿಸುವ ಕೆಲಸ ಮಾಡಬೇಕು ಎಂದರು.
ನಿವೃತ್ತ ಶಿಕ್ಷಕ ಬಸಪ್ಪ ಮಾತನಾಡಿ, ಬಸವಣ್ಣನವರು ವಿಶ್ವಗುರುವಾಗಿದ್ದು, ಅವರ ಒಂದೊಂದು ವಚನಗಳು ಎಲ್ಲಾ ಸಮುದಾಯಗಳಿಗೆ ಎಚ್ಚರಿಕೆ ಗಂಟೆಯಾಗಿವೆ. ಎಲ್ಲರೂ ಬಸವಣ್ಣ ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ವೀರಶೈವ ಮಹಾಸಭಾ ಘಟಕದ ಅಧ್ಯಕ್ಷ ಸಿದ್ದಮಾದಯ್ಯ, ಶಿವಾನಂದ, ಶಿವಶಂಕರ್, ಶಿವಸ್ವಾಮಿ, ರತ್ನಮ್ಮ, ರಾಜೇಶ್ವರಿ, ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.