ಮಾಗಡಿ: ಪಟ್ಟಣದ ಕಲ್ಯಾಗೇಟ್ ವೃತ್ತದಲ್ಲಿ ತಾಲ್ಲೂಕು ಭೋವಿ ಜನಾಂಗದಕ್ಷೇಮಾಭಿವೃದ್ಧಿ ಸಂಘದ ಕಚೇರಿಯನ್ನು ಪೂಜೆ ಸಲ್ಲಿಸಿ ಉದ್ಘಾಟಿಸಲಾಯಿತು.
ತಾಲ್ಲೂಕು ಶಾಖೆ ಅಧ್ಯಕ್ಷ ವೆಂಕಟರಮಣಪ್ಪ ಮಾತನಾಡಿ, ‘ಭೋವಿ ಜನಾಂಗದವರು ಆರ್ಥಿಕ ಮತ್ತು ಸಾಮಾಜಿಕವಾಗಿ ಬಹಳ ಹಿಂದುಳಿದಿದ್ದಾರೆ. ಜನಾಂಗದವರು ಸಂಘಟನೆಯಾಗಬೇಕು. ಜನಾಂಗದವರ ಕುಂದುಕೊರತೆ ಬಗ್ಗೆ ಚರ್ಚಿಸಲು ಸಂಘದ ಕಚೇರಿ ಆರಂಭಿಸಲಾಗಿದೆ. ವಧು-ವರರ ಸಮಾವೇಶ ನಡೆಸುವ ಬಗ್ಗೆ ಮತ್ತು ಶ್ರೀರಂಗನಾಥಸ್ವಾಮಿ ಅರವಟಿಕೆ ಕಟ್ಟಡ ನಿರ್ಮಿಸುವ ಬಗ್ಗೆ ಜನಾಂಗದವರೊಂದಿಗೆಚರ್ಚಿಸಿ ತೀರ್ಮಾನಿಸಲಾಗುವುದು’ ಎಂದು ತಿಳಿಸಿದರು.
‘ಭೋವಿ ಅಭಿವೃದ್ಧಿ ನಿಗಮದಿಂದ ಲಭಿಸುವ ಸೌಲಭ್ಯಗಳು ನಮ್ಮ ಜನಾಂಗದವರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಜನಾಂಗದವರಿಗೆ ಸೌಲಭ್ಯ ಒದಗಿಸಿಕೊಡುವ ಬಗ್ಗೆ ಶಾಸಕ ಎ. ಮಂಜುನಾಥ್ ಅವರಲ್ಲಿ ಮನವಿ ಮಾಡಲಾಗುವುದು’ ಎಂದರು.
ಕಾರ್ಯದರ್ಶಿ ಶಂಕರ್ ಮಾತನಾಡಿ, ‘ಅರಮನೆ, ಗುರುಮನೆ, ಸೆರೆಮನೆ, ಕೋಟೆ ಕೊತ್ತಲ ಜಲಾಶಯ ನಿರ್ಮಿಸಿರುವ ಭೋವಿ ಜನಾಂಗದವರನ್ನು ಸ್ವಾತಂತ್ರ್ಯನಂತರ ಕಡೆಗಣಿಸಲಾಗಿದೆ. ನಮ್ಮ ಜನಾಂಗದ ಶೇ 65ರಷ್ಟು ಜನರು ಬಹಳ ಹಿಂದುಳಿದಿದ್ದು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು. ಇಂದಿನ ಯುವಕರಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕು’ ಎಂದು ಹೇಳಿದರು.
ಸಂಘದ ಗೌರವಾಧ್ಯಕ್ಷ ನಂಜಯ್ಯ, ಉಪಾಧ್ಯಕ್ಷ ಕೃಷ್ಣಮೂರ್ತಿ, ಕಾರ್ಯದರ್ಶಿ ಪಾಂಡುರಂಗ, ಖಜಾಂಚಿ ರಮೇಶ್, ಸಂಘಟನಾ ಕಾರ್ಯದರ್ಶಿ ನವೀನ್, ಶಿವರಾಮ್, ಸಂತೋಷ್, ಪುರಸಭೆ ಮಾಜಿ ಅಧ್ಯಕ್ಷ ನಾಗರಾಜು, ಮುಖಂಡರಾದ ಕೋರಮಂಗಲ ಶ್ರೀನಿವಾಸ್, ಕಲ್ಯಾಗೇಟ್ ಜಿ. ನವೀನ್, ಸಿ.ಜಿ. ಗಿರೀಶ್, ಡ್ರೈವರ್ ವೆಂಕಟೇಶ್, ಪ್ರಸಾದ್, ಕಟ್ಟಡ ಕಾರ್ಮಿಕ ಸಂಘದ ಶಂಕರ್, ವೆಂಕಟಾಚಲಯ್ಯ, ರಂಗನಾಥ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.