ADVERTISEMENT

ಎಚ್‌ಡಿಕೆ ಹೇಳಿಕೆಗೆ ಬಿಜೆಪಿ ತಿರುಗೇಟು

ಒಕ್ಕಲಿಗ ಸಮಾಜವನ್ನು ಒಡೆದಿದ್ದು ಯಾರು? ಅಶ್ವತ್ಥನಾರಾಯಣ ಗೌಡ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 6:19 IST
Last Updated 8 ಫೆಬ್ರುವರಿ 2023, 6:19 IST
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಗೌಡ ಮಾತನಾಡಿದರು
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಗೌಡ ಮಾತನಾಡಿದರು   

ರಾಮನಗರ: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಮಾತಿನ ಮೂಲಕ ಸಮಾಜ ಒಡೆಯುವ ಕೆಲಸ ಮಾಡಬಾರದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಗೌಡ ಆಗ್ರಹಿಸಿದರು.

‘ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿರುದ್ಧ ಕುಮಾರಸ್ವಾಮಿ ಹೇಳಿಕೆ ಖಂಡನೀಯ. ರಾಜಕಾರಣದಲ್ಲಿ ಪರಸ್ಪರ ಟೀಕೆ ಟಿಪ್ಪಣಿಗಳು ಸಹಜ. ಅದನ್ನು ಸ್ಪಧಾತ್ಮಕವಾಗಿ ಸ್ವೀಕರಿಸಿ ಅಭಿವೃದ್ಧಿ ವಿಚಾರವಾಗಿ ಮಾತನಾಡಬೇಕು. ಜೆಡಿಎಸ್‍ನ ಪಂಚರತ್ನ ಯಾತ್ರೆ ಬಗ್ಗೆ ಜೋಶಿ ಆಡಿರುವ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ವಿಫಲರಾಗಿರುವ ಕುಮಾರಸ್ವಾಮಿ ಹತಾಶರಾಗಿ ಸಮಾಜ ಒಡೆಯುವಂತಹ, ಸಮಾಜಗಳನ್ನು ಎತ್ತಿಕಟ್ಟುವಂತಹ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ’ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಜೋಶಿ ಕರ್ನಾಟಕದವರಲ್ಲ, ಮಹಾರಾಷ್ಟ್ರದವರು ಎಂದು ಹೇಳುವುದು ಸರಿಯಲ್ಲ. ಪೇಶ್ವೆ ವಂಶಸ್ಥರು, ಡಿಎನ್‍ಎ ಎಂದು ವೈಯಕ್ತಿಕವಾಗಿ ಕೆಳಹಂತಕ್ಕೆ ಇಳಿದು ಮಾತನಾಡಬಾರದು. ಆದಿಚುಂಚನಗಿರಿ ಮಠಕ್ಕೆ ಪರ್ಯಾಯವಾಗಿ ವಿಶ್ವ ಒಕ್ಕಲಿಗರ ಮಠವನ್ನು ಮಾಡಿ ಸಮಾಜವನ್ನು ಒಡೆದಿದ್ದು ಯಾರು ಎಂದು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಅವರು ತಿರುಗೇಟು ನೀಡಿದರು.

ADVERTISEMENT

ರಾಜ್ಯದಲ್ಲಿ ಬಿಜೆಪಿ ಪರ ಅಲೆ ಎದ್ದಿದೆ. ಇದರಿಂದ ಹತಾಶರಾಗಿರುವ ಕುಮಾರಸ್ವಾಮಿ ಮತದಾರರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ಟೀಕಿಸಿದರು.

ರಾಜ್ಯಕ್ಕೆ ₹1.14 ಲಕ್ಷ ಕೋಟಿ ಅನುದಾನವನ್ನು ಹೆದ್ದಾರಿ ಅಭಿವೃದ್ಧಿಗಳಿಗಾಗಿ ಕೇಂದ್ರ ಸರ್ಕಾರ ನೀಡಿದೆ. ರಾಜ್ಯದ 3.5 ಕೋಟಿ ಜನರಿಗೆ ಆಯುಷ್ಮಾನ್ ಆರೋಗ್ಯ ಕಾರ್ಡ್ ನೀಡಲಾಗಿದೆ. ರಾಮನಗರ ಜಿಲ್ಲೆಯೊಂದರಲ್ಲೇ ₹100 ಕೋಟಿಗೂ ಅಧಿಕ ನೆರವನ್ನು ಕೃಷಿ ಸಮ್ಮಾನ್ ಯೋಜನೆಯಡಿ ರೈತರಿಗೆ ನೀಡಿದೆ. ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಅನುದಾನ ನೀಡಿದ್ದು, ನೀಡುತ್ತಿರುವುದು ಬಿಜೆಪಿ ಸರ್ಕಾರ. ಯಾವುದೇ ಜಾತಿ, ಮತ, ಧರ್ಮಗಳ ತಾರತಮ್ಯವಿಲ್ಲದೆ ವಿದ್ಯಾಸಿರಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದು ಬಿಜೆಪಿಯ ಅಭಿವೃದ್ಧಿ ಪರ್ವ ಎಂದರು.

ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸುರೇಶ್, ಪ್ರಧಾನ ಕಾರ್ಯದರ್ಶಿ ರುದ್ರದೇವರು, ನಗರ ಘಟಕದ ಅಧ್ಯಕ್ಷ ಶಿವಾನಂದ, ಮುಖಂಡರಾದ ಪದ್ಮನಾಭ್, ನಾಗೇಶ್, ಚಂದರಶೇಖರ ರೆಡ್ಡಿ, ಚಂದನ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.