ರಾಮನಗರ: ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಗ್ಗೆ ಜಿಲ್ಲೆಯ ಮುಖಂಡರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸಭೆ ನಡೆಸಿದರು.
ವರ್ಚುಯಲ್ ಸಭೆಯ ಮೂಲಕ ಪಕ್ಷದ ಜಿಲ್ಲಾ ಅಧ್ಯಕ್ಷ ಹುಲುವಾಡಿ ದೇವರಾಜ್ ಸೇರಿದಂತೆ ಹಲವಾರು ಮುಖಂಡರ ಜತೆ ಸೋಲಿನ ಪರಾಮರ್ಶೆ ನಡೆಸಿದ ಡಿಸಿಎಂ, ಗೆಲ್ಲುವ ಅವಕಾಶವಿದ್ದರೂ ಕೈಚೆಲ್ಲಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂಬಂಧ ಕೆಲ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.
ಜೆಡಿಎಸ್ ಮತ್ತು ಕಾಂಗ್ರೆಸ್ ರಾಜ್ಯ ನಾಯಕರು ಚುನಾವಣೆ ವೇಳೆಯಲ್ಲಿ ಜಿಲ್ಲಾ ಕೇಂದ್ರಕ್ಕೆ ಬರಲೇ ಇಲ್ಲ. ಆದರೆ, ನಾವು ಪಕ್ಷದಿಂದ ಸಾಕಷ್ಟು ಬೆಂಬಲ-ಸಹಕಾರ ಕೊಟ್ಟರೂ ನಿರೀಕ್ಷಿತ ಫಲಿತಾಂಶ ಪಡೆಯಲಾಗಿಲ್ಲ. ಮುಂದೆ ಹೀಗೆ ಆಗಬಾರದು ಎಂದರು.
ಸೋತಿದ್ದೇವೆ ನಿಜ. ಹಾಗಂತ ಎದೆಗುಂದಬೇಕಿಲ್ಲ. ಯಾವುದೇ ಕಾರಣಕ್ಕೂ ಅಧೈರ್ಯ ಬೇಡ. ಅದೇ ರೀತಿ ಪಕ್ಷ ಕಟ್ಟುವ ಕೆಲಸದಲ್ಲಿ ನಿರ್ಲಕ್ಷ್ಯವೂ ಸಹಿಸುವುದಿಲ್ಲ ಎಂದರು.
ಚುನಾವಣೆ ಹೊತ್ತಿನಲ್ಲಿ ಅನ್ಯ ಪಕ್ಷಗಳು ಪ್ರಬಲವಾಗಿದ್ದರೂ ಧೈರ್ಯಗುಂದಬಾರದು. ಪಶ್ಚಿಮ ಬಂಗಾಳದಲ್ಲಿ ಅಭ್ಯರ್ಥಿಗಳನ್ನು ಅಪಹರಿಸುವ, ಕಾರ್ಯಕರ್ತರನ್ನು ಕೊಲ್ಲುವಂಥ ಪ್ರಕ್ಷುಬ್ಧ ಪರಿಸ್ಥಿತಿ ಇದ್ದರೂ ಅಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ. ಹೀಗಾಗಿ ಚುನಾವಣೆ ಎಂದ ಮೇಲೆ ಅಧೈರ್ಯಪಡಬಾರದು ಎಂದು ಮುಖಂಡರಿಗೆ ಸ್ಥೈರ್ಯ ತುಂಬಿದರು.
ಬಿಜೆಪಿ ಸಂಘಟನಾ ಕಾರ್ಯದರ್ಶಿ ಕಾಂತರಾಜ್ ಭಾಗಿಯಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.