ADVERTISEMENT

ನನಗೆ ಪಕ್ಷಕ್ಕಿಂತ ಸಮುದಾಯ ಮುಖ್ಯ: ಗುಲಾಬ್‌ ಜಾನ್‌

ಸಿಎಎಗೆ ಬಿಜೆಪಿ ಅಲ್ಪಸಂಖ್ಯಾತ ಮುಖಂಡರಿಂದಲೇ ವಿರೋಧ!

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 14:03 IST
Last Updated 24 ಜನವರಿ 2020, 14:03 IST

ರಾಮನಗರ: ‘ನಮಗೆ ಪಕ್ಷಕ್ಕಿಂತ ನಮ್ಮ ಸಮುದಾಯ ಮುಖ್ಯ. ಸಿಎಎ, ಎನ್‌ಆರ್‌ಸಿ ಕಾಯ್ದೆಗಳಿಂದ ಅಲ್ಪಸಂಖ್ಯಾತ ಸಮುದಾಯಕ್ಕೆ ತೊಂದರೆ ಆಗುವುದಾದರೆ ಅದನ್ನು ವಿರೋಧಿಸುತ್ತೇವೆ’ ಎಂದು ಬಿಜೆಪಿಯ ಮುಖಂಡರಾದ ಗುಲಾಬ್‌ ಜಾನ್‌ ಸ್ಪಷ್ಟನೆ ನೀಡಿದರು.

‘ಈಚೆಗೆ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದ ವೇಳೆ ಸಿಎಎ, ಎನ್‌ಆರ್‌ಸಿ ಕಾಯ್ದೆಯ ಕುರಿತು ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಕ್ತಾರ ಹುಸೇನ್ ಪಠಾಣ ಅವರು ನೀಡಿದ್ದ ಹೇಳಿಕೆ ಅವರ ವೈಯಕ್ತಿಕ. ಆ ಸಂದರ್ಭದಲ್ಲಿ ನಾನಾಗಲೀ, ನನ್ನ ಸಹೋದರ ಆಗಲಿ ಸಿಎಎ ಬೆಂಬಲಿಸಿ ಮಾತನಾಡಿಲ್ಲ. ಸಮುದಾಯದ ಮುಖಂಡರು ಬಂದ ಕಾರಣದಿಂದ ಪಕ್ಷದ ವತಿಯಿಂದ ಸನ್ಮಾನಿಸಿದ್ದೇವೆ. ಕೆಲವರು ಇದನ್ನೇ ಬಳಸಿಕೊಂಡು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ತನ್ವೀರ್ ಮಾತನಾಡಿ ‘ಮುಸ್ಲಿಂ ಸಮುದಾಯದವರಿಗೆ ತೊಂದರೆ ಆಗುವುದಾದರೆ ನಾನೂ ಸಹ ಈ ಕಾಯ್ದೆಗಳನ್ನು ವಿರೋಧಿಸುತ್ತೇನೆ. ನಾವು ಸಮುದಾಯದ ಆಶಯಗಳಿಗೆ ವಿರುದ್ಧವಾಗಿ ಯಾವುದೇ ಕೆಲಸ ಮಾಡಿಲ್ಲ’ ಎಂದು ಸಮಜಾಯಿಷಿ ನೀಡಿದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.